ದ್ವಿತೀಯ ಪಿ.ಯು.ಸಿ ಕೃಷ್ಣೇಗೌಡನ ಆನೆ ಕನ್ನಡ ನೋಟ್ಸ್‌ | 2nd PUC Krishnegowdana Aane Kannada Notes

ಕೃಷ್ಣೇಗೌಡನ ಆನೆ ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು, 2nd PUC Kannada Krishnegowdana Aane lesson Notes Question Answer Guide Summery Pdf Download, ಕೃಷ್ಣೇಗೌಡನ ಆನೆ Notes Pdf, krishnegowdana aane class 12 notes, krishnegowdana aane part-1 notes, ಕೃಷ್ಣೇಗೌಡನ ಆನೆ question answer, ಕೃಷ್ಣೇಗೌಡನ ಆನೆ ನಾಟಕ notes, 12th krishnegowdana aane supplementary notes, krishnegowdana aane class 12 notes.

ತರಗತಿ : ದ್ವಿತೀಯ ಪಿ.ಯು.ಸಿ

ದೀರ್ಘಗದ್ಯದ ಹೆಸರು : ಕೃಷ್ಣೇಗೌಡನ ಆನೆ

ಕೃತಿಕಾರರ ಹೆಸರು : ಕೆ. ಪಿ. ಪೂರ್ಣಚಂದ್ರ ತೇಜಸ್ವಿ

2nd PUC Krishnegowdana Aane lesson Notes

ಕೃತಿಕಾರರ ಪರಿಚಯ :

ಶ್ರೀಯುತ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ( ೧೯೩೮-೨೦೦೭ ) ಕನ್ನಡ ಅಗ್ರಮಾನ್ಯ ಗಣ್ಯಲೇಖಕರಲ್ಲಿ ಮುಖ್ಯರು . ಕುವೆಂಪು – ಹೇಮಾವತಿ ದಂಪತಿಗಳ ಮಗನಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಜನಿಸಿದರು . ಬದುಕಿದ್ದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸಮೀಪದ ನಿಂಬೆಮೂಲೆಯ ‘ ನಿರುತ್ತರ’ದಲ್ಲಿ , ಕೃಷಿ , ಸಾಹಿತ್ಯಕೃಷಿ , ಕಾಫಿ ತೋಟಗಾರಿಕೆ , ಛಾಯಾಗ್ರಹಣ , ಪುಸ್ತಕ ಪ್ರಕಾಶನ , ಶಿಕಾರಿ ಮುಂತಾದ ವೃತ್ತಿಗಳಲ್ಲಿ ತೊಡಗಿಕೊಂಡಿದ್ದ ತೇಜಸ್ವಿಯವರು ನಿಜವಾದ ಅರ್ಥದಲ್ಲಿ ನಿರಂಕುಶಮತಿಗಳಾಗಿದ್ದವರು .

ಇವರ ವಿದ್ಯಾಭ್ಯಾಸ ಮೈಸೂರು , ಶಿವಮೊಗ್ಗ ಮುಂತಾದೆಡೆ ನಡೆಯಿತು . ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ಸರ್ಕಾರಿ ಕೆಲಸವನ್ನು ಒಲ್ಲದೆ ಕೃಷಿಯತ್ತ ಮುಖಮಾಡಿದರು . ಲೋಹಿಯಾರವರ ತತ್ವಚಿಂತನೆ , ಕುವೆಂಪು ಅವರ ಕಲಾಸೃಷ್ಟಿ , ಕಾರಂತರ ಜೀವನದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆಗಳು ತೇಜಸ್ವಿಯವರ ಸಾಹಿತ್ಯ ರಚನೆಯ ಮೇಲೆ ಗಾಢ ಪರಿಣಾಮವನ್ನು ಉಂಟುಮಾಡಿವೆ . ಆದ್ದರಿಂದಲೇ ಅವರು ಜಾತ್ಯತೀತವಾದ , ವರ್ಗಾತೀತವಾದ , ಲಿಂಗಾತೀತವಾದ ಹಾಗೂ ಶ್ರೀಸಾಮಾನ್ಯರ ಸಮಾಜವನ್ನು ಸೃಷ್ಟಿಸಿರುವುದನ್ನು ಕಾಣಬಹುದು . ಸೃಷ್ಟಿಯ ವಿಸ್ಮಯವನ್ನು ನಿಗೂಢವನ್ನು ತೇಜಸ್ವಿ ಕುತೂಹಲದಿಂದ ನೋಡಬಲ್ಲರು . ಸಮಾಜ ಮತ್ತು ಪ್ರಕೃತಿ ಇವೆರಡರ ತೀವ್ರವಾದ ಮುಖಾಮುಖಿಯನ್ನು ಇವರು ತಮ್ಮ ಕೃತಿಗಳಲ್ಲಿ ಚಿತ್ರಿಸಿದ್ದಾರೆ . ಸಮಾಜವಾದಿ ಚಳುವಳಿ , ರೈತ ಚಳುವಳಿ , ಜಾತಿವಿನಾಶ ಸಮ್ಮೇಳನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ತೇಜಸ್ವಿ ತಮ್ಮ ವಿಶಿಷ್ಟ ವೈನೋದಿಕ ದರ್ಶನದ ಚಿಕಿತ್ಸಕ ದೃಷ್ಟಿಯನ್ನು ಕಥೆಗಳಲ್ಲಿ ಬೀರಿದವರು .

ಹುಲಿಯೂರಿನ ಸರಹದ್ದು , ಅಬಚೂರಿನ ಪೋಸ್ಟಾಫೀಸು , ಕಿರಗೂರಿನ ಗಯ್ಯಾಳಿಗಳು , ಪರಿಸರದ ಕಥೆ , ಪಾಕಕ್ರಾಂತಿ ಮತ್ತು ಇತರ ಕಥೆಗಳು – ಇವು ತೇಜಸ್ವಿಯವರ ಕಥಾಸಂಕಲನಗಳು , ಸ್ವರೂಪ , ನಿಗೂಢ ಮನುಷ್ಯರು , ಕರ್ವಾಲೋ , ಚಿದಂಬರ ರಹಸ್ಯ , ಜುಗಾರಿಕಾಸ್ , ಮಾಯಾಲೋಕ -೧ , ಕಾಡು ಮತ್ತು ಕೌರ – ಇವು ಕಾದಂಬರಿಗಳು .

ಇವಲ್ಲದೆ : ಬೃಹನ್ನಳೆ ಸೋಮುವಿನ ಸ್ವಗತಲಹರಿ ( ಕವಿತೆ ) , ಯಮಳ ಪ್ರಶ್ನೆ ( ನಾಟಕ ) , ವ್ಯಕ್ತಿವಿಶಿಷ್ಟ ಸಿದ್ಧಾಂತ ( ಸೈದ್ಧಾಂತಿಕ ಬರಹ ) , ವಿಮರ್ಶೆಯ ವಿಮರ್ಶೆ ( ವಿಮರ್ಶೆ ) , ಅಣ್ಣನ ನೆನಪುಗಳು ( ಜೀವನ ಚರಿತ್ರೆ ) , ಕಿರಿಯರಿಗಾಗಿ ಪರಿಸರ , ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು ( ಪರಿಸರ ) ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ . ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ ಎಂಬುದು ತೇಜಸ್ವಿಯವರ ಪ್ರವಾಸಕಥನ , ಕಾಡಿನ ಕಥೆಗಳ ಮಾಲಿಕೆಯ ೫ ಸಂಪುಟಗಳು , ಮಿಲೆನಿಯಂ ಪುಸ್ತಕ ಸರಣಿ , ವೈಜಾನಿಕ ಸಾಹಿತ್ಯ , ಪರಿಸರ ವಿಸ್ಮಯ ಮಾಲಿಕೆ , ಪಕ್ಷಿಲೋಕ ಹೀಗೆ ನಾನಾ ಕೃತಿಗಳನ್ನು ತೇಜಸ್ವಿ ಕನ್ನಡಕ್ಕೆ ನೀಡಿದ್ದಾರೆ . ಮರಾಠಿ , ಹಿಂದಿ , ಮಲೆಯಾಳಂ , ತಮಿಳು , ಇಂಗ್ಲಿಷ್ , ಜಪಾನಿ ಭಾಷೆಗಳಿಗೆ ತೇಜಸ್ವಿಯವರ ಅನೇಕ ಕೃತಿಗಳು ಅನುವಾದಗೊಂಡಿದೆ . ಅಬಚೂರಿನ ಪೋಸ್ಟಾಫೀಸು , ಕುಬಿ ಮತ್ತು ಇಯಾಲ , ತಬರನ ಕತೆ ಚಲನಚಿತ್ರಗಳಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿವೆ . ತಬರನ ಕತೆ , ಕಿರಗೂರಿನ ಗಯ್ಯಾಳಿಗಳು , ಕೃಷ್ಣಗೌಡನ ಆನೆ ಪರಿಸರದ ಕಥೆಗಳು ರಂಗದ ಮೇಲೆ ಪ್ರಯೋಗಗೊಂಡಿವೆ . ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಪಂಪ ಪ್ರಶಸ್ತಿ , ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಶಿವರಾಮಕಾರಂತ ಪ್ರಶಸ್ತಿ , ರಾಷ್ಟ್ರೀಯ ಸ್ವರ್ಣ ಕಮಲ ಪ್ರಶಸ್ತಿಯ ಚಿನ್ನದ ಪದಕ , ರಾಷ್ಟ್ರೀಯ ಕಥಾ ಪ್ರಶಸ್ತಿ , ಭಾರತೀಯ ಭಾಷಾ ಪರಿಷತ್ತಿನ ಪ್ರಶಸ್ತಿ ಮುಂತಾದ ಪುರಸ್ಕಾರಗಳಿಗೆ ತೇಜಸ್ವಿ ಬಾಜನರಾಗಿದ್ದರು .

ಗದ್ಯದ ಆಶಯ :

ಶ್ರೀಯುತ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ ಕೃಷ್ಣಗೌಡನ ಆನೆ ‘ ಎಂಬ ನೀಳತೆಯು ಅವರ ಅತ್ಯಂತ ಮಹತ್ವದ ರಚನೆಗಳಲ್ಲಿ ಒಂದೆನಿಸಿದೆ . ಆನೆಯ ನೆಪದಲ್ಲಿ ಊರಿನಲ್ಲಿ ನಡೆಯುವ ಎಲ್ಲ ದುರಂತ ಘಟನೆಗಳಿಗೆ ವಿಚಿತ್ರವಾದ ಸಂಬಂಧಗಳು ಬೆಳೆದು ನಿಗೂಢವಾಗಿ ಮನುಷ್ಯ ಮತ್ತು ಪರಿಸರದ ನಡುವೆ ವಿಷಮತೆಗೆ ಕಾರಣವಾಗುವ ಸಾಮಾಜಿಕ ಸನ್ನಿವೇಶದ ಮುಖವನ್ನು ಕೃಷ್ಣಗೌಡನ ಆನೆ ‘ ಕಥೆಯು ಚಿತ್ರಿಸುತ್ತದೆ . ಬದುಕಿನ ಗಂಭೀರ ಕಾಳಜಿಗಳನ್ನು ಮತ್ತು ಕಾಣದ ಕುದ ರಹಸ್ಯಗಳನ್ನು ಪತ್ತೆದಾರಿ ರೀತಿಯಲ್ಲಿ ಕಾಣಿಸುವ ನೆಲೆ ಈ ಕಥೆಯಲ್ಲಿದೆ .

ಇಲ್ಲಿ ಬರುವ ಮಾವುತ ವೇಲಾಯುಧ , ಫಾರೆಸರ್ ನಾಗರಾಜ , ತಿಪ್ಪಣ್ಣ , ಡ್ರೈವರ್ ಅಬ್ಬಾಸ್ , ಕ್ಲೀನರ್ ಕೃಷ್ಣ , ಸುಬ್ಬಣ್ಣನ ಮೇಕೆಗಳು – ಈ ಎಲ್ಲರ ಸಾವಿಗೆ ಕೃಷ್ಣಗೌಡನ ಆನೆಯೇ ಕಾರಣ ಎಂದು ಆರೋಪಿಸುವುದು . ವ್ಯವಸ್ಥೆಯ ವ್ಯಂಗ್ಯವಾಗಿದೆ . ಹಿಂದೆ ಅದು ಮಠವೊಂದರ ಪಟ್ಟದಾನೆಯಾಗಿತ್ತು , ಹರಾಜಿನಲ್ಲಿ ಕೊಂಡುಕೊಂಡ ಮೇಲೆ ಈಗ ಅದು ಕೃಷ್ಣಗೌಡನ ಜೀತದಾನೆಯಾಗಿದೆ . ಊರಿನಲ್ಲಿ ಆಗುವ ದುರಂತಗಳಿಗೆ , ಅನಾಹುತಗಳಿಗೆ ಸಾವುಗಳಿಗೆ , ಕಳ್ಳ ಸಾಗಾಣಿಕೆ , ಗಂಧ ಸಾಗಾಣಿಕೆ ಈ ಎಲ್ಲಾ ವ್ಯವಹಾರಗಳಿಗೆ ಆ ಆನೆಯೇ ಕಾರಣ ಎಂದು ಆರೋಪಿಸುವುದು ಹಾಸ್ಯಾಸ್ಪದವಾಗಿದೆ . ಪ್ರಸ್ತುತ ಭಾರತದ ಸಾಮಾಜಿಕ , ರಾಜಕೀಯ , ಧಾರ್ಮಿಕ , ಸಾಂಸ್ಕೃತಿಕ ಹಾಗೂ ಅಧಿಕಾರಶಾಹಿ ವ್ಯವಸ್ಥೆಯ ಕರಾಳ ಸತ್ಯಗಳನ್ನು ಈ ಕಥೆ ಚಿತ್ರಿಸಿದೆ . ವ್ಯವಸ್ಥೆಯ ಭ್ರಷ್ಟತೆ , ನಿಷ್ಕ್ರಿಯತೆ , ಈರ್ಥೈಗಳಿಂದ ಎದುರಾಗುವ ದುರಂತಗಳ ಆಶಯ ಈ ಕಥೆಯ ಮುಖ್ಯ ಭಿತ್ತಿಯಾಗಿದೆ . ಮನುಷ್ಯನ ಸಣ್ಣತನ ಹಾಗೂ ಸ್ವಾರ್ಥಗಳಿಗೆ ಮನುಷ್ಯನೇ ಕಾರಣನಾದರೂ ಈ ಕಥೆಯಲ್ಲಿ ನಡೆಯುವ ವೈರುದ್ಧ ಹಾಗೂ ದುರಂತಗಳಿಗೆ ಆನೆಯೇ ಅಪರಾಧಿಯಾಗುವುದು ಮತ್ತು ಆನೆ ಕೊನೆಗೆ ಇದ್ದಕ್ಕಿದ್ದಂತೆ ಮಾಯವಾಗುವುದು ಒಂದು ದುರಂತ ವ್ಯಂಗ್ಯವಾಗಿದೆ .

ತೇಜಸ್ವಿ ಅವರ ಕಾಳಜಿಯ ಕೇಂದ್ರವೇ ಗಾಮಭಾರತ . ಇಲ್ಲಿಯೇ ನಿಂತು ಜಾಗತಿಕ ವಿದ್ಯಮಾನಗಳನ್ನು , ಬದಲಾವಣೆಗಳನ್ನು ವೀಕ್ಷಿಸುವ ತೇಜಸ್ವಿಯವರಿಗೆ , ಈ ವಿದ್ಯಮಾನಗಳ ಬಲೆಯಲ್ಲಿ ಗ್ರಾಮಭಾರತ ಸಿಕ್ಕು ಒದ್ದಾಡುತ್ತಿರುವಂತೆಯೂ ಕಾಣಿಸುತ್ತದೆ . ಈ ಕಥೆಯಲ್ಲಿನ ಕೃಷ್ಣಗೌಡನ ಆನೆ ಪಾಪದ ಪಾಣಿ , ಭಾರೀ ಶರೀರ ಮತ್ತು ಅಪಾರ ಶಕ್ತಿಯನ್ನು ಹೊಂದಿದ್ದರೂ ಈ ಆನೆ ಬಾಯಿಯಿಲ್ಲದ ಪ್ರಾಣಿಯಾಗಿರುವ ಕಾರಣ ಬಾಯಿಯಿರುವ ಎಲ್ಲರ ಶೋಷಣೆಗೆ ವಸ್ತುವಾಗುತ್ತದೆ . ಪ್ರತಿಯೊಬ್ಬನಿಂದಲೂ ತನಗೆ ಕಂಡ ರೀತಿಯಲ್ಲಿ ಈ ಪಾಣಿಯನ್ನು ಅರ್ಥೈಸುವುದು , ಇದಕ್ಕೊಂದು ವ್ಯಕ್ತಿತ್ವ ಆರೋಪಿಸುವುದು ನಡೆಯುತ್ತದೆ . ಎಲ್ಲ ಪಾಪಕೃತ್ಯಗಳ ಅಪರಾಧವನ್ನು ಆನೆ ಹೊತ್ತುಕೊಳ್ಳಬೇಕಾಗುತ್ತದೆ . ಬಾಯಿಯಿಲ್ಲದ ‘ ಎಲ್ಲರಿಗೂ ಎಲ್ಲದಕ್ಕೂ ಸಂಕೇತದಂತೆ ಕಾಣುವ ಈ ಆನೆಯನ್ನು ಕೇಂದ್ರವಾಗಿರಿಸಿಕೊಂಡು ಲೇಖಕರು ಅನೇಕ ಸಂಗತಿಗಳನ್ನು , ದುರಂತಗಳನ್ನು ನಿರೂಪಿಸಿದ್ದಾರೆ . ಪಾತ್ರಗಳ ಮೂಲಕ ಪ್ರಸ್ತುತ ಸಮಾಜದ ಅನೇಕ ಅಂಶಗಳನ್ನು ಹಾಸ್ಯಮಿಶ್ರಿತ ವ್ಯಂಗ್ಯದ ಮೂಲಕ ನಮ್ಮ ಮುಂದಿಡುವ ಜೀವಂತಿಕೆಯ ಬರವಣಿಗೆಯ ಮಾದರಿ ತೇಜಸ್ವಿಯವರದ್ದಾಗಿದೆ . ಈ ಕಾರಣದಿಂದ ಅವರು ಸಮಕಾಲೀನ ಕಥೆಗಾರರ ನಡುವೆ ಭಿನ್ನವಾಗಿ ಕಾಣುತ್ತಾರೆ .

ಕೃಷ್ಣಗೌಡನ ಬಳಿಯಿರುವ ಆನೆ ಪಟ್ಟಣವಾಸಿಯಾಗಿದೆ . ಈ ಕಾರಣದಿಂದಾಗಿ ಪಟ್ಟಣದ ಜನ ಅದಕ್ಕೂ ತಮ್ಮಂತೆಯೇ ಒಂದು ವ್ಯಕ್ತಿತ್ವವನ್ನು ಆರೋಪಿಸಿದ್ದಾರೆ . ಆನೆಯೂ ಕಾಡಾನೆಗಳಿಂದ ಸಂಪೂರ್ಣವಾದ ಭಿನ್ನ ನಡವಳಿಕೆಯನ್ನು ಹೊಂದಿದೆ . ಕಾಡಾನೆಗಳಲ್ಲಿ ಪ್ರಾಕೃತಿಕವಾದ ಚಲನವಲನಗಳು ಪ್ರಧಾನವಾಗಿದ್ದರೆ , ಈ ಆನೆಯು ಮಾನವನ ಬದುಕಿನ ನಡವಳಿಕೆ ಮತ್ತು ನಿಯಂತ್ರಣಕ್ಕೆ ಒಳಗಾಗಿದೆ . ಮಾನವನ ಸ್ವಾರ್ಥಮೂಲ ನೆಲೆಯಿಂದ ಉತ್ಪನ್ನವಾದ ಬಲವಂತದಲ್ಲಿ ತನ್ನ ಸಹಜ ಸ್ವಭಾವವನ್ನು ಬಿಟ್ಟುಕೊಟ್ಟಿದೆ . ಅದು ತನಗಾಗಿ ಅಲ್ಲದ ಪರರ ಇಚ್ಛೆ ಮತ್ತು ನಿಯಂತ್ರಣದಲ್ಲಿ ಬದುಕಬೇಕಾಗಿದೆ . ತೇಜಸ್ವಿ ಅವರ ಮಹಾತ್ವಾಕಾಂಕ್ಷೆಯ ಈ ಕಥೆಯು ತೇಜಸ್ವಿ ಅವರ ಬದುಕಿನ ಮತ್ತು ಬರವಣಿಗೆಯ ಸಮಗ್ರ ಗ್ರಹಿಕೆಯನ್ನು ಹಿಡಿದಿಡಲು ಪ್ರಯತ್ನಿಸಿದೆ . ಈ ಕಥೆಯು ಇಂಗ್ಲಿಷ್ , ಹಿಂದಿ , ಮರಾಠಿ ಮತ್ತು ಮಲೆಯಾಳಿ ಭಾಷೆಗಳಿಗೆ ತರ್ಜುಮೆಗೊಂಡಿದೆ .

ದ್ವಿತೀಯ ಪಿ.ಯು.ಸಿ ಕೃಷ್ಣೇಗೌಡನ ಆನೆ ಕನ್ನಡ ನೋಟ್ಸ್‌ 2 PUC Krishnegowdana Ane Kannada Notes.

ಶಬ್ದಾರ್ಥ :

ಖಾಯಮ್ಮು – ನಿತ್ಯವೂ : ಪುಕಾರು – ಗದ್ದಲ , ತಕರಾರು , ಅಪವಾದ ; ಇನಾಮು – ಬಹುಮಾನ ; ಪರಿ – ರೀತಿ ; ಅನ್ಯಮನಸ್ಯ – ಮನಸ್ಸು ಬೇರೆಡೆಯಲ್ಲಿರುವುದು ; ಪೀಜು -ಫ್ಯೂಸ್ ( fuse ) ; ಜಪ್ಪಿ – ಚಚ್ಚಿ ; ದೂಷಿಸು – ಆಪಾದನೆ ಮಾಡು ; ಸಲಾಮ್ – ನಮಸ್ಕಾರ : ಹವಣಿಸು – ಯೋಚಿಸು , ಉಪಾಯಮಾಡು : ತಾಸ – ಕಷ್ಟ : ಸಾತ್ವಿಕ – ಒಳ್ಳೆಯತನ ; ವರ್ಜಿಸು ಬಿಟ್ಟುಬಿಡು ; ಬಡಾಯಿ – ಜಂಬ ; ಕ್ಷಿಪ್ರಮಾರ್ಗ – ಸುಲಭದ ದಾರಿ ; ಪಗಡುದಸ್ತು -ಮೈಕೈತುಂಬಿಕೊಂಡಿರು ; ಸೈರಣೆ ತಾಳ್ಮೆ : ಅವಜ್ಞೆ – ಕಡೆಗಣಿಸುವಿಕೆ : ಐ ವಿಟ್‌ನೆಸ್ ( eye – witness ) -ಪ್ರತ್ಯಕ್ಷ ಸಾಕ್ಷಿ : ಮರ್ಮಕ್ಕೆ- ಮನಸ್ಸಿಗೆ ತಾಗುವಂತಹ; ಜಖಂ – ಹಾನಿಯಾಗು ; ಪರಿವರ್ತನೆ- ಬದಲಾವಣೆ : ಕ್ಷುದ್ರ – ಚಿಕ್ಕ ಪುಟ್ಟ ; ಅಸಂಭವ – ಸಾಧ್ಯವಾಗದ ; ಇತ್ಯರ್ಥ- ತೀರ್ಮಾನ ; ಪ್ರವರ -ಅನವಶ್ಯಕ ವಿವರಣೆ ; ಅಭಿಮತ- ಅಭಿಪ್ರಾಯ ;

ನಾಟ – ಮರದ ದಿಮ್ಮಿ : ರೋಸಿಹೋಗು- ಸಾಕಾಗಿಹೋಗು ; ರೇಜಿಗೆ – ಜುಗುಪ್ಪೆ ; ಪಾರ್ಶ್ವ – ಭಾಗ ; ಬಿಟ್ಟಿ – ಪುಕ್ಕಟೆ ; ಆಸೆ – ಕಾಳಜಿ : ಚಿತಾವಣೆ ಇತರರನ್ನು ಪ್ರಚೋದಿಸುವುದು ; ಕುಗುರು – ತೂಕಡಿಸು : ಕಾನ್‌ಫಿಸಿಕೇಟ್ ‘ ( confisicate- ಜಪ್ತಿಮಾಡು , ಮುಟ್ಟುಗೋಲು ಹಾಕು , ವಶಪಡಿಸಿಕೋ : ಮನ್ನಾ – ರದ್ದು ; ಎರಾಡಿಕೇಶನ್ ( eradication ) ನಿರ್ಮೂಲನ , ಮೂಲೋತ್ಪಾಟನ ; ಮನ್ನಾಜಂಗ್ಲಿ – ಮೀಸಲು ಅರಣ್ಯ : ಮಹಜರ್ – ಸ್ಥಳ ಪರಿಶೀಲನೆ ; ವಕ್ತಾರ – ಪ್ರತಿನಿಧಿ ; ಪರ್ವಾನಗಿ – ಅನುಮತಿ ; ಬರಖಾಸ್ತಾಗು- ಮುಗಿದುಹೋಗು ; ದುರ್ಬುದ್ಧಿ- ಕೆಟ್ಟಬುದ್ಧಿ : ಹಿಯ್ಯಾಳಿಸು – ನಿಂದಿಸು ; ಅಂಕುಶ – ಆನೆಯನ್ನು ಹದ್ದಿನಲ್ಲಿಡಲು ಉಪಯೋಗಿಸುವ ಒಂದು ಲೋಹದ ಸಾಧನ ; ನೀಳದಂತ- ಉದ್ದನೆಯ ಹಲ್ಲು ; ಗಂಡಿ – ತಗ್ಗು ಪ್ರದೇಶ , ಕುಳಿ ; ವಿಘ್ನ – ತೊಂದರೆ ; ಅವಕ್ಕಾಗು – ಮಾತಿಲ್ಲದಂತಾಗು , ಆಶ್ಚರ್ಯಪಡು ; ಪಂಗಿ – ಸಾಲು ; ಹುಯ್ಯಲಿಡು – ರೋಧಿಸು ; ಸ್ಥಿಮಿತ – ಹಿಡಿತ ; ಪ್ರಹಸನ – ನಾಟಕ ; ಪೀಕಲಾಟ – ಸಂಕಷ್ಟ : ಶಂಕಿಸು – ಅನುಮಾನಿಸು ; ಖೂನಿ – ಕೊಲೆ ; ವದಂತಿ ಸುದ್ದಿ : ಹೇಸದ – ಹೆದರದ.

2nd PUC Krishnegowdana Aane lesson Notes question answer

I. ಒಂದು ವಾಕ್ಯದಲ್ಲಿ ಉತ್ತರಿಸಿ : ( ಒಂದು ಅಂಕದ ಪ್ರಶ್ನೆಗಳು )

1 ) ದುರ್ಗಪ್ಪ ಏನನ್ನು ಕೇಳಿ ಪಡೆಯಲು ಬಂದಿದ್ದನು ?

ದುರ್ಗಪ್ಪ ಕೊಡಲಿ ಕೇಳಿ ಪಡೆಯಲು ಬಂದಿದ್ದನು .

2 ) ದುರ್ಗಪ್ಪನ ಪ್ರಕಾರ ತಲ್ಲೆ ಡಿಪಾರ್ಟ್‌ಮೆಂಟ್ ಯಾವುದು ?

ದುರ್ಗಪ್ಪನ ಪ್ರಕಾರ ತಲ್ಲೆ ಡಿಪಾರ್ಟ್‌ಮೆಂಟ್ ಟೆಲಿಫೋನ್ ಡಿಪಾರ್ಟ್‌ಮೆಂಟ್ .

3 ) ಕೃಷ್ಣಗೌಡರ ಆನೆ ಮೊದಲು ಯಾವ ಮಠದಲ್ಲಿತ್ತು ?

ಕೃಷ್ಣಗೌಡರ ಆನೆ ಮೊದಲು ಗೂಳೂರು ಮಠದಲ್ಲಿತ್ತು .

4 ) ಆನೆಗೆ ಜಗದ್ಗುರುಗಳನ್ನು ಹೊರುವ ಕೆಲಸ ತಪ್ಪಿ ಹೋದುದೇಕೆ ?

ಜಗದ್ಗುರುಗಳನ್ನು ಜನರು ಅಡ್ಡ ಪಲ್ಲಕ್ಕಿಯಲ್ಲಿ ತಮ್ಮ ಹೆಗಲ ಮೇಲೆ ಹೊರಲು ತೊಡಗಿದ್ದರಿಂದ ಆನೆಗೆ ಜಗದ್ಗುರುಗಳನ್ನು ಹೊರುವ ಕೆಲಸ ತಪ್ಪಿತು .

5 ) ಸರ್ಕಾರ ಎಮ್‌ ಕಂಪನಿಗೆ ಯಾವ ಗುತ್ತಿಗೆ ಕೊಟ್ಟಿತು ?

ಸರ್ಕಾರ ಎಮ್‌ ಕಂಪನಿಗೆ ಬೆಂಕಿಕಡ್ಡಿಗೆ ಮರ ಕಡಿಯಲು ಗುತ್ತಿಗೆ ಕೊಟ್ಟಿತು .

6 ) ಆನೆ ಯಾರ ಅಂಗಡಿಯನ್ನು ದೂಡಿ ಬೀಳಿಸಿತು ?

ಆನೆ ರೆಹಮಾನನ ಅಂಗಡಿಯನ್ನು ದೂಡಿ ಬೀಳಿಸಿತು .

7 ) ರೆಹಮಾನ್ ಐ ಎಟನೆಸ್ ಎಂದು ಯಾರನ್ನು ತೋರಿಸಿದನು ?

ರೆಹಮಾನ್ ಐ ವಿಟನೆಸ್ ಎಂದು ಜುಬೇದಳನ್ನು ತೋರಿಸಿದನು .

8 ) ನಿರೂಪಕರ ಇಕಾಲಜೆಸ್ಟ್ ಗೆಳೆಯ ಯಾರು ?

ನಿರೂಪಕರ ಇಕಾಲಜೆಸ್ಟ್ ಗೆಳೆಯ ಪ್ರಕಾಶ .

9 ) ಆನೆ ಇಲ್ಲದ್ದರಿಂದ ವೇಲಾಯುಧ ಎಲ್ಲಿ ಕೆಲಸಕ್ಕೆ ಸೇರಿದ ?

ಆನೆ ಇಲ್ಲದ್ದರಿಂದ ವೇಲಾಯುಧ ಶಿವೇಗೌಡರ ಸಾಮಿಲ್ಲಿನಲ್ಲಿ ಕೆಲಸಕ್ಕೆ ಸೇರಿದ .

10 ) ನಿರೂಪಕರಿಗಿದ್ದ ಕೆಟ್ಟ ಕುತೂಹಲ ಯಾವುದು ?

ತರಲೆ ಕೇಸುಗಳ ಜಾಡು ಹಿಡಿದು ವಿಷಯ ತಿಳಿದುಕೊಳ್ಳುವ ಕೆಟ್ಟ ಕುತೂಹಲ ನಿರೂಪಕರದ್ದು .

11 ) ಬಲಭೀಮನಂತಿದ್ದ ಆನೆಯ ಮಾವುತ ನೋಡಲು ಹೇಗಿದ್ದ ?

ಬಲಭೀಮನಂತಿದ್ದ ಆನೆಯ ಮಾವುತ ನೋಡಲು ನರಪೇತಲ ನಾರಾಯಣನಂತಿದ್ದ .

12 ) ಶಿವೇಗೌಡರು ರಾತ್ರೋರಾತ್ರಿ ಆನೆ ಕರೆದುಕೊಂಡು ಹೋದುದೇಕೆ ?

ಮರ ಕಡಿದು ನಾಟ ಸಾಗಿಸುವುದಕ್ಕೆ ಶಿವೇಗೌಡರು ರಾತ್ರೋರಾತ್ರಿ ಆನೆ ಕರೆದುಕೊಂಡು ಹೋದರು .

13 ) ಪೋಸ್ಟ್‌ಮನ್ ಜಬ್ಬಾರನಿಗೆ ಒದಗಿದ ತೊಂದರೆ ಏನು ?

ಜಬ್ಬಾರನಿಗೆ ನಾಯಿ ಕಚ್ಚಿತು .

14 ) ಜಬ್ಬಾರ್‌ ವೆಟರರಿ ಆಸ್ಪತ್ರೆಗೆ ಬರಲು ಕಾರಣವೇನು ?

ಜಬ್ಬಾರ್‌ ವೆಟರರಿ ಆಸ್ಪತ್ರೆಗೆ ಬರಲು ಕಾರಣ ನಾಯಿ ಕಚ್ಚಿದ್ದಕ್ಕೆ ಇಂಜೆಕ್ಷನ್ ತೆಗೆದುಕೊಳ್ಳಲು .

15 ) ಪುಟ್ಟಯ್ಯ ಯಾರು ?

ಪುಟ್ಟಯ್ಯ ವೆಟರರಿ ಸ್ಟಾಕ್‌ಮನ್

15 ) ಮುನ್ಸಿಪಾಲಿಟಿ ಪ್ರೆಸಿಡೆಂಟ್‌ರ ಹೆಸರೇನು ?

ಮುನ್ಸಿಪಾಲಿಟಿ ಪ್ರೆಸಿಡೆಂಟ್‌ರ ಹೆಸರು ‘ ಖಾನ್ ಸಾಹೇಬರು

16 ) ನಿರೂಪಕರ ಪ್ರಕಾರ ಮುನ್ಸಿಪಾಲಿಟಿ ಪ್ರೆಸಿಡೆಂಟರ ಕರ್ತವ್ಯ ಯಾವುದು ?

ನಿರೂಪಕರ ಪ್ರಕಾರ ಊರನ್ನು ಸ್ವಚ್ಛವಾಗಿಡುವುದು ಮುನ್ಸಿಪಾಲಿಟಿ ಪ್ರೆಸಿಡೆಂಟರ ಕರ್ತವ್ಯವಾಗಿದೆ .

17 ) ಟೆಲಿಫೋನ್‌ ಕಂಬದ ಮೇಲೆ ಮೃತನಾದ ಲೈನ್‌ಮೆನ್ ಯಾರು ?

ತಿಪ್ಪಣ್ಣ ಟೆಲಿಫೋನ್ ಕಂಬದ ಮೇಲೆ ಮೃತನಾದ ಲೈನ್‌ಮೆನ್

18 ) ರಮೇಶ್‌ಬಾಬು ಯಾರು ?

ರಮೇಶ್‌ಬಾಬು ಟೆಲಿಫೋನ್ ಎಕ್ಸ್‌ಚೇಂಜಿನ ಜೂನಿಯರ್ ಇಂಜಿನಿಯರ್ ,

19 ) .ಟೆಲಿಫೋನ್‌ ಸಿಬ್ಬಂದಿ ಯಾರ ವಿರುದ್ಧ ಮುಷ್ಕರ ಹೂಡಿದರು ?

ಟೆಲಿಫೋನ್ ಸಿಬ್ಬಂದಿ ವಿದ್ಯುತ್ ಇಲಾಖೆಯ ವಿರುದ್ಧ ಮುಷ್ಕರ ಹೂಡಿದರು .

20 ) ಹಳೇಕೊಪ್ಪದ ಸುಬ್ಬಣ್ಣನಿಗೆ ಆನೆಯಿಂದಾದ ತೊಂದರೆ ಏನು ?

ಹಳೇಕೊಪ್ಪದ ಸುಬ್ಬಣ್ಣನ ಕೊಟ್ಟಿಗೆ ಮಾಡು ಕುಸಿದು ಬಿದ್ದಿತ್ತು . ಕೊಟ್ಟಿಗೆಯೊಳಗಿನ ಹಲವಾರು ಕುರಿ – ಮೇಕೆಗಳು ಸತ್ತಿದ್ದವು .

21 ) ಯಾವ ವಿಷಯ ಪ್ರಸ್ತಾಪಿಸಲು ಲೇಖಕರು ಮೀಟಿಂಗಿಗೆ ಹೋಗಿದ್ದರು ?

ಕಂತ್ರಿ ವಿಷಯ ಪ್ರಸ್ತಾಪಿಸಲು ಲೇಖಕರು ಮೀಟಿಂಗಿಗೆ ಹೋಗಿದ್ದರು .

22 ) ಆನೆಯ ಕಾಲಿಗೆ ಸರಪಳಿ ಕಟ್ಟಲಾಗದೆಂದು ವೇಲಾಯುಧ ಹೇಳಿದ್ದೇಕೆ ?

ಆನೆಯ ಕಾಲಿಗೆ ಸರಪಳಿ ಹಾಕುವ ಜಾಗದಲ್ಲಿ ಗಾಯವಾಗಿರುವುದರಿಂದ ಅದು ವಾಸಿಯಾಗುವವರೆಗೆ ಸರಪಳಿ ಕಟ್ಟಲಾಗುವುದಿಲ್ಲ ಎಂದು ವೇಲಾಯುಧ ಹೇಳಿದನು .

23 ) ರೇಂಜರ್‌ ಆನೆಗೆ ಶೂಟ್ ಮಾಡುವಂತೆ ಯಾರಿಗೆ ಸೂಚಿಸಿದರು ?

ರೇಂಜರ್ ಆನೆಗೆ ಶೂಟ್ ಮಾಡುವಂತೆ ನಾಗರಾಜನಿಗೆ ಸೂಚಿಸಿದರು .

24 ) ಆನೆ ಶಾಸ್ತದವನು ಏನೆಂದು ಭವಿಷ್ಯ ನುಡಿದನು ?

ಆನೆಯಿಂದ ಐದು ಜನ ಪ್ರಾಣ ಕಳೆದುಕೊಳ್ಳುತ್ತಾರೆಂದು ಆನೆ ಶಾಸ್ತ್ರದವನು ಭವಿಷ್ಯ ನುಡಿದನು .

25 ) ನಾಗರಾಜ ಕೋವಿ ಹಿಡಿದು ಎಲ್ಲಿ ಕುಳಿತಿದ್ದ ?

ನಾಗರಾಜ ಕೋವಿ ಹಿಡಿದು ಹೆಸರುವಾಸಿಯಾದ ಶಿಕಾರಿ ಗಂಡಿಯಲ್ಲಿ ಕುಳಿತಿದ್ದ .

26 ) ಆನೆ ಕಣ್ಮರೆಯಾದ ವಿಚಾರವನ್ನು ನಾಗರಾಜನಿಗೆ ಹೇಳಿದವರಾರು ?

ಆನೆ ಕಣ್ಮರೆಯಾದ ವಿಚಾರವನ್ನು ನಾಗರಾಜನಿಗೆ ಹೇಳಿದವರು ರಾಮಪ್ಪ .

27 ) ಸಾರ್ವಜನಿಕರು ನಾಗರಾಜನ ಸಾವನ್ನು ಕುರಿತು ಏನೆಂದು ಯೋಚಿಸಿದರು ?

ಕಳ್ಳಸಾಗಾಣಿಕೆಗಾರರು ನಾಗರಾಜನನ್ನು ಅವನ ಗ್ಯಾಂಗೆ ಖಿನಿ ಮಾಡಿ ಹೆಣ ನಾಪತ್ತೆ ಮಾಡಿರಬೇಕು ಎಂದರು .

28 ) ಪೋಲಿಸರು ಏನೆಂದು ಮಹಜರು ಬರೆದುಕೊಂಡರು ?

ಪೋಲಿಸರು ಕಾಡೆಲ್ಲ ಹುಡುಕಿ ನಾಗರಾಜನ ಕೋವಿ ಸಿಕ್ಕಿದೆ . ಹೆಣ ಸಿಗಲಿಲ್ಲ . ಎಂದು ಮಹಜರು ಬರೆದುಕೊಂಡರು .

II. ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕದ ಪ್ರಶ್ನೆಗಳು )

1 ) ನಮ್ಮ ಕಡೆ ಕೆಮ್ಮುವುದು ಕಾಲಿಂಗ್ ಬೆಲ್ ಇದ್ದ ಹಾಗೆ ಎಂದು ನಿರೂಪಕರು ಹೇಳಿದ್ದೇಕೆ ?

ಲೇಖಕರಾದ ತೇಜಸ್ವಿಯವರು ಮಲೆನಾಡಿನ ಘಟ್ಟಪ್ರದೇಶದಲ್ಲಿ ಕೆಮ್ಮುವುದು ಕಾಲಿಂಗ್ ಬೆಲ್ ಇದ್ದ ಹಾಗೆ ಎಂದು ಆಲಕಾರಿಕವಾಗಿ ಹೇಳಿದ್ದಾರೆ . “ ಏಕೆಂದರೆ ಬಹುಶಃ ಭಾಷೆ ಉಪಯೋಗಿಸಿ ಕರೆಯಬೇಕೆಂದರೆ ಕೆಲವು ತೊಂದರೆಗಳು ಎದ್ದು ತೋರುತ್ತದೆ . ಮನೆಯವರ ಹೆಸರು ಗೊತ್ತಿರಬಹುದು , ಗೊತ್ತಿಲ್ಲದೆಯೂ ಇರಬಹುದು .ಆದರೆ ಹೆಸರು ಹಿಡಿದು ಕರೆಯಬೇಕೋ ಬೇಡವೋ ? ಏಕವಚನ ಉಪಯೋಗಿಸಿ ಬೇಕೋ ? ಬಹುವಚನ ಉಪಯೋಗಿಸಬೇಕೋ ? ಈ ಎಲ್ಲಾ ಬಿಕ್ಕಟ್ಟುಗಳಿಗೆ ಒಮ್ಮೆ ಉಪಾಯ ಎಂದರೆ ಒಂದೆರಡು ಸಾರಿ ಕೆಮ್ಮಿದರೆ ಒಳಗಿನಿಂದ ಹೊರ ಬರುವುದು ಅಥವಾ ಅಲ್ಲೆ ಇದ್ದರೆ ತಿರುಗಿ ನೋಡಬಹುದು .

2 ) ದುರ್ಗಪ್ಪ ಏಕೆ ಬಂದಿರಬಹುದೆಂದು ನಿರೂಪಕರು ಯೋಚಿಸಿದರು ?

ಎಲೆಕ್ಟಿಕ್ ಲೈನ್ ಮ್ಯಾನ್ ದುರ್ಗಪ್ಪ ಕೈಯಲ್ಲಿ ಕಟ್ಟಿಂಗ್ ಪ್ರೈಯರ್ ಹಾಗೂ ತಂತಿ – ಅಲ್ಲಿಯವರೆಗೆ ಬಂದಿದ್ದಾನೆಂದು ಅರ್ಥ ಬರುತ್ತಿತ್ತು . ಹಾಗಿದ್ದರೆ ಏನೋ ಇನಾಮು ಸಿಂಬಿ ಹಿಡಿದುಕೊಂಡು ನಿಂತದ್ದನ್ನು ನೋಡಿ ಏನೂ ಕೆಲಸವಿಲ್ಲದೆ ಪುರುಸೊತ್ತಾಗಿದ್ದರಿಂದ ಕೇಳಲೋ ಅಥವಾ ಚಂದಾ ವಸೂಲಿನೋ , ಇಲ್ಲವೇ ಮನೆ ಉಪಯೋಗಕ್ಕೆ ಕಾಫಿ ಬೀಜವನ್ನೋ ಏಲಕ್ಕಿಯನ್ನೂ ಕೇಳಲು ಈ ರೀತಿ ಪೀಠಿಕೆ ಹಾಕುತ್ತಿದ್ದಾನೆಂದು ಯೋಚಿಸಿದರು .

3 ) ಕೊಂಬೆ , ಲೈನ್ ಮೇಲೆ ಬೀಳಲು ಆನೆಯೇ ಕಾರಣ ಎಂಬುದಕ್ಕೆ ದುರ್ಗಪ್ಪ ಹೇಳಿದ ಸಂಗತಿಗಳಾವುವು ?

ಮರದ ಕೆಳಗೆ ಬುಟ್ಟಿಗಟ್ಟಲೆ ಬಿದ್ದಿರುವ ಆನೆ ಅದ್ದಿಯನ್ನು ನೋಡಿ ಆನೆಯು ಎಲೆ ತಿನ್ನಲು ಬಂದು ಕೊಂಬೆ ಎಳೆದು ಆ ಕೊಂಬೆ ತಂತಿಯ ಮೇಲೆ ಬಿದ್ದು ಎಲ್ಲಾ ಲೈನ್ ಡೆಡ್ ಆಗಿದೆ . ಆ ಕೊಂಬೆ ಕಡಿದು ಪಕ್ಕ ಸರಿಸುವವರೆಗೂ ಅಲ್ಲಿ ಕರೆಂಟ್ ಇಲ್ಲ ಎಂದು ಹೇಳಿದನು . ಅಲ್ಲದೆ ಶಿವೇಗೌಡರ ಸಾಮಿಲ್‌ನ ಹತ್ತಿರ ಕೊಂಬೆ ಮುರಿದು ಎಲೆಕ್ನಿಕ್ ವೈರ್‌ ಮೇಲೆ ಬಿದ್ದಿರುವುದಾಗಿ ದುರ್ಗಪ್ಪ ಹೇಳಿದ .

4 ) ಕೃಷ್ಣಗೌಡರ ಆನೆ ಹುಟ್ಟಿ ಬೆಳೆದ ಬಗೆ ಹೇಗೆ ?

ಗೂಳೂರು ಮಠದ ಆನೆ ಹಾಕಿದ ಮರಿಯೇ ಕೃಷ್ಣಗೌಡರ ಬಳಿ ಇದ್ದ ಆನೆ . ಇದು ಹುಟ್ಟಿದ್ದು ಬೆಳೆದದ್ದು ಎಲ್ಲ ಊರಿನಲ್ಲಿ ಜನಗಳ ನಡುವೆಯೇ . ಆದ್ದರಿಂದ ಮೂಡಿಗೆರೆಯ ಪೇಟೆಗೆ ಬಹಳ ಒಗ್ಗಿತ್ತು . ದನಕರುಗಳು ಓಡಾಡುವ ಹಾಗೆ ಪೇಟೆ ಬೀದಿಯಲ್ಲಿ ಓಡಾಡಿಕೊಂಡಿತ್ತು . ಸ್ಕೂಲ್ ಮಕ್ಕಳು ಹತ್ತಿರ ಬರಲು ಹೆದರಿದ್ದರಿಂದಲೇ ಅವರು ದೂರದಿಂದಲೇ ‘ ಗೌರಿ ‘ ಎಂದು ಕೂಗಿದರೆ ಸಾಕು ಸೊಂಡಿಲೆತ್ತಿ ಸಲಾಮ್ ಮಾಡುತ್ತಿತ್ತು . ಅಂಗಡಿಯವರು ಖರ್ಚಾಗದ ಹಣ್ಣು ಇಟ್ಟಿರುತ್ತಿದ್ದರು . ಈ ಆನೆ ಖಾಯಂ ಆಗಿ ಎಲ್ಲಾ ಪೆಟ್ಟಿಗೆ ಅಂಗಡಿಗಳ ಬಳಿಗೂ ಹೋಗಿ ಅದನ್ನೆಲ್ಲ ಸೊಂಡಿಲಲ್ಲಿ ತಗೊಂಡು ತಿನ್ನುತ್ತಿತ್ತು . ಹೀಗೆ ಕೃಷ್ಣಗೌಡರ ಆನೆ ಹುಟ್ಟಿ ಬೆಳೆದಿತ್ತು .

5 ) ಮಠದವರಿಗೆ ಆನೆಗಿಂತ ವೇಲಾಯುಧನನ್ನು ಸಾಕಲು ಪ್ರಾಸಾದುದೇಕೆ ?

ಮಠದವರಿಗೆ ಆನೆಗಿಂತ ವೇಲಾಯುಧವನ್ನು ಸಾಕುವುದು ಹೆಚ್ಚು ತ್ರಾಸವಾಗಿತ್ತು . ಏಕೆಂದರೆ ಇಪ್ಪತ್ತನಾಲ್ಕು ಗಂಟೆಯೂ ಕುಡಿದೇ ಇರುತ್ತಿದ್ದ . ಈ ಮಾವುತ ಮಠದ ಸಾತ್ವಿಕ ವಾತಾವರಣಕ್ಕೆ ದೊಡ್ಡ ತಲೆ ನೋವಾಗಿದ್ದ , ಅವನ ದುರ್ನಡತೆಗಳಿಂದಾಗಿ ಅವನಿಗೆ ಛೀಮಾರಿ ಹಾಕಿ ಒಮ್ಮೆ ಓಡಿಸಿದಾಗ ಆನೆ ಅನೇಕ ದಿನಗಳವರೆಗೆ ಯಾರ ಮಾತನ್ನು ಕೇಳದೆ ಊಟವನ್ನು ವರ್ಜಿಸಿದ್ದರಿಂದ ವೇಲಾಯುಧ ನನ್ನ ಪುನಃ ಕೇರಳದಿಂದ ಕರೆ ತರಲಾಯಿತು . ಇದನ್ನು ತಿಳಿದ ವೇಲಾಯುಧ ಮಠಕ್ಕೆ ಮತ್ತಷ್ಟು ಕಿರುಕುಳ ಕೊಡಲಾರಂಭಿಸಿದ . ಇದರಿಂದ ಮಠದವರಿಗೆ ಮತ್ತಷ್ಟು ತಾಸವಾಯಿತು .

6 ) ಆನೆ ಸಾಕುವುದರ ಬಗ್ಗೆ ಜನರ ನಂಬಿಕೆ ಏನಾಗಿತ್ತು ?

ಆನೆ ಸಾಕುವುದು ಎಂದರೆ ಎಲೆಕ್ಷನ್ನಿಗೆ ನಿಂತ ಹಾಗೆ ! ಮನೆ ಮಠ ಎಲ್ಲಾ ಹಾಳು ಮಾಡಿಕೊಂಡು ಹೆಂಡತಿ ಮಕ್ಕಳ ಬಾಯಿಗೆ ಮಣ್ಣು ಹಾಕುವ ಕ್ಷಿಪ್ರ ಮಾರ್ಗ ಇದೆಂದು ಎಲ್ಲಾ ಜನರು ದೃಢವಾಗಿ ನಂಬಿದ್ದರು .

7 ) ಸೊರಗಿದ್ದ ಆನೆಯನ್ನು ಕೃಷ್ಣಗೌಡ ಹೇಗೆ ಸಾಕಿದ ?

ಮಠದಲ್ಲಿ ಬರಿ ಒಣಹುಲ್ಲು , ಮೊಸರನ್ನು ತಿಂದು ಸೊರಗಿದ್ದ ಆನೆಗೆ ಕೃಷ್ಣಗೌಡನು ಬದನೆಸೊಪ್ಪು , ಹಸಿಹುಲ್ಲು , ಹಿಂಡಿ , ಬೆಲ್ಲ , ಗೆಣಸು ಎಲ್ಲ ಕೊಟ್ಟು ಕೃಷ್ಣಗೌಡ ಪಗಡುದಸ್ತಾಗಿ ಬೆಳೆಸಿ ಸಾಕಿದ್ದನು .

8 ) ಕಾಡಾನೆಗಳ ಹಾವಳಿಗೆ ಪ್ರಕಾಶ ನೀಡಿದ ಕಾರಣಗಳೇನು ?

ಕಾಡಾನೆಗಳ ಹಾವಳಿಗೆ ಪ್ರಕಾಶ್ ನೀಡಿದ ಕಾರಣವೆಂದರೆ “ ಅರಣ್ಯ ಇಲಾಖೆಯವರು ಕಾಡಿನ ಮರಗಳನ್ನು ತೆಗೆದು ನೀಲಗಿರಿ , ಆಕೇಶಿಯಾ ಮುಂತಾದ ಆನೆಗಳಿಗೆ ನಿರುಪಯುಕ್ತವಾದುದನ್ನು ನೆಡುತ್ತಿರುವುದು ” ಆಗಿದೆ ಎಂದು ಹೇಳಿದನು .

9 ) ಕಾಡಪ್ಪ ಶೆಟ್ಟರು ಯಾವ ವರ್ತಮಾನವನ್ನು ಮುಟ್ಟಿಸಿದರು ?

“ ಕೃಷ್ಣಗೌಡನ ಆನೆಯ ಮೇಲೆ ಅಯ್ಯಪ್ಪಸ್ವಾಮಿ ಪೋಟೋ ಇಟ್ಟು ಮೆರವಣಿಗೆ ಮಾಡುತ್ತಿದ್ದಾಗ ಅದಕ್ಕೆ ಇದ್ದಕ್ಕಿದ್ದಂತೆ ತಲೆಕೆಟ್ಟು ಅಂಬಾರಿ ಸಮೇತ ಕಾಡಿಗೆ ಓಡಿ ಹೋಯ್ತು ” ಎಂಬುದಾಗಿ ಕಾಡಪ್ಪ ಶೆಟ್ಟರು ವರ್ತಮಾನವನ್ನು ಮುಟ್ಟಿಸಿದರು .

10 ) .ನಿರೂಪಕರಿಗೆ ಆನೆಗಳ ಬಗ್ಗೆ ಯಾವ ಅನುಮಾನ ಮೂಡಿತು ?

ಹೊತ್ತುಕೊಂಡಿದ್ದ ಮೈ ತುಂಬಾ ಸಿಂಗಾರ ಮಾಡಿಕೊಂಡು ಬೆನ್ನ ಮೇಲೆ ಅಂಬಾರಿ ಆನೆಯನ್ನು ಕಾಡಾನೆಗಳು ತಮ್ಮ ಗುಂಪಿಗೆ ಸೇರಿಕೊಳ್ಳುತ್ತವೆಯೇ ಎಂದು ನನಗೆ ಅನುಮಾನ ಆಯ್ತು .

11 ) ‘ ಫಾರೆಸ್‌ ಡಿಪಾರ್ಟ್‌ಮೆಂಟಿನವರ ನಂಬರ್ ಒನ್ ಎನಿಮಿಗಳು ಯಾರು ಯಾರು ?

ಫಾರೆಸ್ ಡಿಪಾರ್ಟ್‌ಮೆಂಟಿನವರ ನಂಬರ್‌ ಒನ್‌ ಎನಿಮಿಗಳು ಎಲೆಕಿಕ್ ಡಿಪಾರ್ಟ್ ಮೆಂಟೆನವರು , ಟೆಲಿಫೋನ್ ಡಿಪಾರ್ಟ್‌ಮೆಂಟಿನವರು ಹಾಗೂ ಪಿಡಬ್ಲೂಡಿ ಡಿಪಾರ್ಟ್‌ಮೆಂಟಿನವರು .

12 ) ಫಾರೆಸ್ಟ್ ಡಿಪಾರ್ಟ್‌ಮೆಂಟಿನ ಮುಂದಿದ್ದ ತುಕ್ಕು ಹಿಡಿದ ವಾಹನಗಳ ಸ್ಥಿತಿ ಹೇಗಿತ್ತು ?

ಫಾರೆಸ್ಟ್ ಡಿಪಾರ್ಟ್‌ಮೆಂಟಿನ ಕಾರುಗಳೆಲ್ಲ ತುಕ್ಕು ಹಿಡಿದು ಕುಗುರುತ್ತ ಕುಳಿತಿದ್ದವು . ಒಂದು ಕಾರಿನ ಚಕ್ರದ ಮೇಲೆ ಹುತ್ತವೇ ಬೆಳೆದಿತ್ತು . ಇನ್ನೊಂದೆರಡರ ಮೇಲೆ ಯಾವೊ ಕಾಡಬಳ್ಳಿಗಳು ಹಬ್ಬ ತೊಡಗಿದ್ದವು . ಅವುಗಳ ಸದ್ಯದ ಶೋಚನೀಯ ಸ್ಥಿತಿ ನೋಡಿದರೆ ಎಂದಾದರೂ ರಸ್ತೆ ಮೇಲೆ ಓಡಾಡುತ್ತಿದ್ದವೇ ಎಂಬ ಅನುಮಾನ ಬರುವುದು , ಅವುಗಳ ಮೇಲಿನ ಕೇಸು ಇತ್ಯರ್ಥವಾಗುವುದರೊಳಗೆ ಅವುಗಳೆಲ್ಲ ತುಕ್ಕಿನ ಮುದ್ದೆಗಳಾಗಿ ಗುಜರಿಯವರಿಗೂ ಕೆಲಸಕ್ಕೆ ಬರುತ್ತಿರಲಿಲ್ಲ . ಇದು ಫಾರೆಸ್ಟ್ ಡಿಪಾರ್ಟ್‌ಮೆಂಟಿನ ಮುಂದಿದ್ದ ತುಕ್ಕು ಹಿಡಿದ ವಾಹನಗಳ ಸ್ಥಿತಿಯಾಗಿತ್ತು .

13 ) ನಾಗರಾಜ ದುರ್ಗಪ್ಪನ ಮೇಲೆ ಏನೆಂದು ರೇಗಿದನು ?

ದುರ್ಗಪ್ಪ ತಾನು ಮರಕಡಿದಿಲ್ಲವೆಂದು , ಕೃಷ್ಣಗೌಡರ ಆನೆ ಕೊಂಬೆಯನ್ನು ಮುರಿದು ಬೀಳಿಸಿದೆಯೆಂದು ಹೇಳಿದ್ದಕ್ಕೆ ನಾಗರಾಜ ಹಾಗಂತ ಹೇಳದೆ ಬರೊಡ್ತೀಯಾ ? ಹಾಗಿದ್ರೆ ಹೇಳು ಅದನ್ನು ಎಳಕೊಂಡು ಬಂದು ಅಂಬಾಸಿಡರ್ ಕಾರಿನ ಜೊತೆ ಕಟ್ಟಾಕಿ ಬರೆ ಹಾಕಿಬಿಡ್ತೀನಿ . ನಿನ್ನ ಮಕಾರೇನಿದ್ರು ಬರಣಿಗೇಲಿ ಇರಬೇಕು . ಹಂಗಿದ್ರೆ ಮಾತ್ರ ನಾನು ಆಕ್ಷನ್ ತಗೊಳ್ಳೋದು ಎಂದು ಗುಡುಗಿದ .

14 ) ಆನೆ ಮರತಳ್ಳುವ ಬಗೆಯನ್ನು ನಿರೂಪಕರು ಹೇಗೆ ವಿವರಿಸಿದ್ದಾರೆ ?

ಆನೆ ಮರ ತಳ್ಳುವ ಬಗೆಯನ್ನು ನಿರೂಪಕರು ಬಹಳ ಸೊಗಸಾಗಿ ವರ್ಣಿಸಿದ್ದಾರೆ . “ ದೊಡ್ಡ – ದೊಡ್ಡ ಮರಗಳಿಗೆ ಹಣೆಹಚ್ಚಿ ಅದು ಒಮ್ಮೆ ತಳ್ಳಿದರೆ ಸಾಕು ಬೇರುಗಳೆಲ್ಲ ಪಟಪಟ ನೆಲದಿಂದೆದ್ದು ಮರ ಬುಡ ಸಮೇತ ಪಲ್ಟಾಯಿಸಿ ಬಿಡುತ್ತದೆ . ತೀರಾ ದೊಡ್ಡ ಮರಗಳಾದರೆ ಅವುಗಳ ಬುಡದಲ್ಲಿನ ಮಣ್ಣು ಬಿಡಿಸಿ ಅದರ ಬೇರುಗಳನ್ನು ಕಡಿದು ಇಗೆ ತಳ್ಳಲು ಹೇಳುತ್ತಿದ್ದರು . ಎಂತಹ ಮರಗಳಾದರೂ ಆನೆಯ ದೈತ್ಯಶಕ್ತಿಯ ಎದುರು ಚೀತ್ಕರಿಸಿ ನೆಲಕ್ಕೆ ಉರುಳುತ್ತಿದ್ದವು .

15 ) ಡ್ರೈವರ್‌ನ ತಲೆ ಜಜ್ಜಿ ಹೋದದ್ದು ಹೇಗೆ ?

ಆನೆ ಅದಕ್ಕೆ ಕಾರಣವೆ ? ನಾಟಗಳಿಗೂ ಲಾರಿಗೂ ಹಗ್ಗ ಬಿಗಿದು ಕಟ್ಟಿದ್ದು ಬಿಚ್ಚಬೇಕೆಂಬುದು ಮರೆತು ಆನೆಗೆ ಮರದ ದಿಮ್ಮಿ ಉರುಳಿಸಲು ಹೇಳಿದಾಕ್ಷಣ ಲಾರಿ ಉರುಳಿತು . ನಿದ್ದೆ ಮಾಡುತ್ತಿದ್ದ ಮಹಾಶಯ ಲಾರಿಯಿಂದ ಉರುಳಿದಾಗ ಜಾಕ್ ದೊಪ್ಪನೆ ಆತನ ತಲೆಯ ಡ್ರೈವರ್ ಹೋಯಿತು . ಅದಕ್ಕೆ ಆನೆ ಖಂಡಿತ ಕಾರಣವಲ್ಲ ಅದಕ್ಕೆ ಮೇಲೆ ಬಿದ್ದು ತಲೆ ಕಾರಣ ಮತ್ತಿನಲ್ಲಿದ್ದ ವೇಲಾಯುಧನೇ ಆಗಿದ್ದ .

16 ) ತನ್ನ ಕೆಲಸ ಅತ್ಯಂತ ಅಪಾಯಕಾರಿಯೆಂದು ದುರ್ಗಪ್ಪ ವಿವರಿಸಿದ್ದು ಹೇಗೆ ?

ತನ್ನ ಕೆಲಸ ಅತ್ಯಂತ ಅಪಾಯಕಾರಿಯೆಂದು ದುರ್ಗಪ್ಪ ವಿವರಿಸಿದ್ದು ಈ ರೀತಿ “ ಏನು ಸ್ವಾಮಿ ಸಾಯೋದಕ್ಕೆ ಹೆದರೋನು ನಾನು ಅಂತ ತಿಳಿಕ್ಕೊಂಡ ? ಲೈನ್‌ಮೆನ್ ಕೆಲಸಕ್ಕೆ ಸೇರಿದ ಮೇಲೆ ಪ್ರಾಣದ ಆಸೆ ಇಟ್ಕಂಡ್ರೆ ಆಗುತ್ತ ? ನಮ್ಮ ಡಿಪಾರ್ಟ್‌ಮೆಂಟಿನ ಲೈನ್‌ಮೆನ್‌ಗಳಾದರೂ ಇವರೆಗೂ ಸರ್ವಿಸ್ ಮುಗಿಸಿ ರಿಟೈರ್ ಆಗೋದೆ ಇಲ್ಲ . ಕರಂಟಿನ ಜೊತೆಗಿನ ಕೆಲಸ ಒಂದಲ್ಲ ಒಂದು ದಿನ ಎಚ್ಚರ ತಪ್ಪಿದ್ರೂ ಅಲ್ಲಿಗೆ ನಮ್ಮ ಸರ್ವಿಸ್ ಮುಗಿದ್ದಂಗೆ ಅಲ್ಲವಾ ? ತನ್ನ ಕೆಲಸ ಇಡೀ ಜಗತ್ತಿನಲ್ಲೇ ಅತ್ಯಂತ ಅಪಾಯಕಾರಿ ಕೆಲಸ ಎಂದು ವಿವರಿಸಿದ .

17 ) ಜಬ್ಬಾರ್ ನಿರೂಪಕರಿಗೆ ಅಂಚೆ ವಿಲೇವಾರಿಯ ಬಗ್ಗೆ ಅಸಡ್ಡೆಯಾಗಿ ಏನು ಹೇಳಿದ ?

ಜಬ್ಬಾರ್ ನಿರೂಪಕರಿಗೆ ಅಂಚೆ ವಿಲೇವಾರಿಯ ಬಗ್ಗೆ ಮೂರು ದಿನದಿಂದ ಪೋಸ್ಟ್ ಕೊಟ್ಟಿರಲಿಲ್ಲ . ಯಾವಾಗ ಆಕ್ಷೇಪಿಸಿದರು “ ಅಯ್ಯೋ ಯಾವುದೋ ಮದ್ಯೆ ಮನೆ ಕಾಗದ ಸಾರ್ ನೀವೇನು ಹೋಗೋದಿಲ್ಲ ಏನಿಲ್ಲ ಅವನ್ನು ಇವತ್ತು ಕೊಟ್ಟರೂ ಒಂದೇ ನಾಳೆ ಕೊಟ್ಟರೂ ಒಂದೇ ಎಂದು ಅಸಡ್ಡೆಯಿಂದ ಹೇಳುತ್ತಿದ್ದ .

18 ) ನಿರೂಪಕರು ಕ್ಯಾಲಿಕ್ಯುಲೇಟರಿನಲ್ಲಿ ಲೆಕ್ಕ ಹಾಕಿ ಜಬ್ದಾರ್‌ಗೆ ಏನೆಂದರು ?

ಎಂದರೂ ಎರಡು ಲಕ್ಷ ಕಿಲೋ ಮೀಟರ್ ನಡೆದಿದ್ದೀಯ , ನಿನ್ನ ಮೂಗಿನ ನೇರಕ್ಕೆ ಕಡಿ ನೆಟ್ಟಿಗೆ ನಡೆದಿದ್ದರೆ ಇಡೀ ಭೂಮಂಡಲ ಸುತ್ತಿ ಬರಬಹುದಿತ್ತು ಎಂದು ಹೇಳಿದರು .

19 ) ನಾಯಿ ಕಚ್ಚಿದ್ದೆಲ್ಲಿ ಎಂದಾಗ ಜಬ್ಬಾರ್‌ ಇರುಸು ಮುರುಸಿನಿಂದ ಏನು ಹೇಳಿದನು ?

ನಾಯಿ ಕಚ್ಚಿದ್ದೆಲ್ಲಿ ಎಂದಾಗ ಇರುಸುಮುರುಸಿನಿಂದ “ ಅದು ಬೀದೀಲಿ ತೋರಿಸೋ ಹಂಗಿಲ್ಲ , ನನ್ನಗಂದು ಅಂತಾ ಜಾಗದಲ್ಲಿ ಕಚ್ಚಿದೆ . ಪ್ಯಾಂಟ್ ಬಿಚ್ಚ ಬೇಕಾಗುತ್ತೆ ‘ ಎಂದು ದನಿ ತಗ್ಗಿಸಿ ಜಬ್ಬಾರ್ ಹೇಳಿದ .

20 ) ಹುಚ್ಚು ನಾಯಿಗಳು ಆಸ್ಪತ್ರೆಯಲ್ಲಿ ಹೇಗೆ ವರ್ತಿಸುತ್ತವೆ ಎಂದು ಪುಟ್ಟಯ್ಯ ಹೇಳಿದನು ?

ಹುಚ್ಚು ನಾಯಿಗಳು ಆಸ್ಪತ್ರೆಯಲ್ಲಿ ಮೇಜು , ಕುರ್ಚಿ , ಕಾಲಿಗೆಲ್ಲ ಕಚ್ಚುತ್ತವೆ . ಅದಕ್ಕೆ ತಲೆಕೆಟ್ಟು ಕಂಡಕಂಡಿದ್ದಕ್ಕೆಲ್ಲ ಕಚ್ಚುತ್ತವೆ . ಆನೆ ಚರ್ಮಕ್ಕೆ ಹಲ್ಲು ನಾಟೋದಿಲ್ಲ ನಿಜ ಆದರೆ ಹಲ್ಲು ನಾಟಬೇಕೆಂದೇನೂ ಇಲ್ಲ ತಗೊಳ್ಳಿ , ಅದರ ಮೈ ಮೇಲೆ ಒಂದು ಗೀರು ಗಾಯ ಇದ್ರು ಸಾಕು ಹುಚ್ಚು ನಾಯಿ ಜೊಲ್ಲು ತಾಗಿದರೆ ಇವತ್ತಲ್ಲ , ಇನ್ನು ಒಂದು ವರ್ಷಕ್ಕಾದರೂ ಹುಚ್ಚು ಬಂದೆಬರದೆ ಎಂದು ಪುಟ್ಟಯ್ಯ ಹೇಳಿದ .

21 ) ನಾಯನ್ನು ಕೊಲ್ಲದೆ ನೌಕರರು ಸುಳ್ಳು ಹೇಳಿರುವರೆಂದು ನಿರೂಪಕರು ಯಾವ ಸಲಹೆ ನೀಡಿದರು ?

ನಾಯನ್ನು ಕೊಲ್ಲದೆ ನೌಕರರು ಸುಳ್ಳು ಹೇಳಿರುವರು . ಒಂದು ನಾಯನ್ನು ಕೊಲ್ಲದೆ ನಿಮಗೆ ಸುಳ್ಳು ಲೆಕ್ಕ ಕೊಟ್ಟಿದ್ದಾರೆ . ಖಾನ್ ಸಾಬ್ ಒಂದು ಸಾರಿ ನೀವು ಪೇಟೆ ಬೀದಿಯಲ್ಲಿ ತಿರುಗಾಡಿದರೆ ಗೊತ್ತಾಗುತ್ತೆ . ಒಂದು ಕೆಲಸ ಮಾಡಿ ಇನ್ನು ಮೇಲೆ ನಾಯಿ ಕೊಂದರೆ ಬಾಲ ತಗೊಂಡು ಬಂದು ತೋರಿಸ ಬೇಕು ಅಂತ ಹೇಳಿ ಅವರ ಲೆಕ್ಕ ಸುಳ್ಳೋ ನಿಜವೋ ನಿಮಗೆ ಗೊತ್ತಾಗುತ್ತೆ ಎಂಬುದಾಗಿ ನಿರೂಪಕರು ಸಲಹೆ ನೀಡಿದರು .

22 ) ಆನೆಯೇ ತಿಪ್ಪಣ್ಣನ ಸಾವಿಗೆ ಕಾರಣವೆಂದು ದುರ್ಗಪ್ಪ ಹೇಳಿದಾಗ ನಿರೂಪಕರ ಪ್ರತಿಕ್ರಿಯೆ ಏನು ?

ಆನೆಯೇ ತಿಪ್ಪಣ್ಣನ ಸಾವಿಗೆ ಕಾರಣವೆಂದು ದುರ್ಗಪ್ಪ ಹೇಳಿದಾಗ ನಿರೂಪಕರು “ ಅದೇನ್ಮಾಡುತ್ತಯ್ಯ ಆನೆ ಎಲ್ಲೋ ಕಂಬದ ಮೇಲೆ ಸತ್ತಿರೋ ತಿಪ್ಪಣ್ಣನಿಗೂ , ಎಲ್ಲೋ ಓಡಾಡಿಕೊಂಡಿರೋ ಆನೆಗೂ ಕತ್ತಿರಲಯ್ಯ , ಬಾಯಿಲ್ಲದೋರು ಈ ಪ್ರಪಂಚದಲ್ಲಿ ಬದುಕೋ ಹಾಗೆ ಇಲ್ಲವೇನಯ್ಯ ? ” ಎಂದರು .

23 ) ಡ್ರೈವರ್ ಅಬ್ಬಾಸ್ , ಕ್ಲೀನರ್ ಕೃಷ್ಣರ ಸಾವಿಗೆ ಕಾರಣವೇನು ?

ಲೋಡು ಲಾರಿ ತಕ್ಷಣ ಬಿಟ್ಟಕೊಂಡು ಬರುತ್ತಿದ್ದ ಅಬ್ಬಾಸ್‌ಗೆ ಇದ್ದಕ್ಕಿದ್ದಂತೆ ಎರಡು ದಂ ನೀಡಿ ಎಳೆಯುವ ತೆವಲು ಶುರುವಾಯ್ತು , ಕ್ಲೀನರ್‌ಗೆ ಸ್ಟೇರಿಂಗ್ ಹಿಡಿಯಲು ಹೇಳಿ ಬೀಡಿ ಹತ್ತಿಸಕೊಳ್ಳ ತೊಡಗಿದ . ಲಾರಿ ದೊಡ್ಡ ಮರದ ಕಡೆಗೆ ನುಗ್ಗಿತು . ಸೇರಿಂಗ್ ಎಂದು ಕೂಗುತ್ತ ಲಾರಿಯನ್ನು ದಾರಿ ಕಡೆ ತಿರುಗಿಸಲು ಯತ್ನಿಸಿದ . ಕೃಷ್ಣನಿಗೆ ಮೈ ಮೇಲಿನ ಪರಿವೆ ಇದ್ದ ಹಾಗೆ ಕಾಣಲಿಲ್ಲ . ಅವನು ಸ್ಟೇರಿಂಗ್ ಬಿಗಿ ಹಿಡಿದಿದ್ದ ನಿಸ್ಸಾಹಯಕನಾಗಿ ಒದ್ದಾಡುತ್ತಿದ್ದ ಅವನಿಗೆ ಬ್ರೇಕ್ ಹಾಕಲು ಕೂಡ ಹೊಳೆಯಲಿಲ್ಲ . ಅಪಾರ ತೂಕದ ದಿಮ್ಮಿಗಳು ಕ್ಯಾಬಿನ್ ಮುರಿದು ಮುನ್ನುಗ್ಗಿದ್ದವು . ಮರಕ್ಕೂ , ದಿಮ್ಮಿಗಳಿಗೂ ನಡುವೆ ಸಿಕ್ಕಿದ ಕ್ಲೀನರ್ ಡ್ರೈವರ್ ಇಬ್ಬರೂ ಅಲ್ಲೇ ಸತ್ತರು .

24 ) ಡ್ರೈವರ್‌ ಅಬ್ಬಾಸ್‌ ಮತ್ತು ಕೃಷ್ಣರ ಸಾವಿಗೆ ಆನೆ ಕಾರಣವಲ್ಲ ಎಂದು ಕೃಷ್ಣಗೌಡರಿಗೆ ಏಕೆ ಹೇಳಲಾಗಲಿಲ್ಲ ?

ಡ್ರೈವರ್ ಅಬ್ಬಾಸ್ ಮತ್ತು ಕ್ಲೀನರ್‌ ಕೃಷ್ಣರ ಸಾವಿಗೆ ಆನೆ ಕಾರಣವಲ್ಲವೆಂದು ಕೃಷ್ಣಗೌಡರಿಗೆ ಹೇಳಲಾಗಲಿಲ್ಲ ಏಕೆಂದರೆ ಅಲ್ಲಿ ಆನೆಯ ಹೆಜ್ಜೆ ಗುರುತುಗಳು ಸ್ಪಷ್ಟವಾಗಿ ಮೂಡಿದ್ದವು .

25 ) ಆನೆಯನ್ನು ಹದ್ದುಬಸ್ತುನಲ್ಲಿಡುವುದರ ಬಗ್ಗೆ ವೇಲಾಯುಧನ ಅಪ್ಪ ಏನು ತಿಳಿಸಿದ್ದ ?

ಆನೆಯ ಕಾಲಿನ ಬೆರಳುಗಳಿಗೆ ಅಂಕುಶದಿಂದ ತಿವಿದರೆ ಎಂತಹ ಮುಂಡು ಆನೆಯಾದರೂ ಹದ್ದುಬಸ್ತಿಗೆ ಬರುವುದೆಂದು ವೇಲಾಯುಧನ ಅಪ್ಪ ತಿಳಿಸಿದ್ದನು .

26 ) ಖೇಡಿಗಳು ನಾಗರಾಜನನ್ನು ಖೂನಿ ಮಾಡಿರುವರೆಂದು ರಾಮಪ್ಪ ಹೇಗೆ ವಿವರಿಸಿದನು ?

ಖೇಡಿಗಳು ನಾಗರಾಜನನ್ನು ಖೂನಿ ಮಾಡಿರುವರೆಂದು ರಾಮಪ್ಪ ವಿವರಿಸುತ್ತ “ ನಾಗರಾಜ ಗಂಗಾಧರನ ಗ್ಯಾಂಗಿನ ಕಾರನ್ನು ನಿಲ್ಲಿಸಿ ಒಳಗೆ ಏನಿದೆ ಎಂದು ಚೆಕ್ ಮಾಡಲು ಇಣುಕಿ ನೋಡಿದನಂತೆ , ಒಳಗಿದ್ದ ಒಬ್ಬ ಖೇಡಿ ನಾಗರಾಜನ ತಲೆಯನ್ನು ಹೊರಗೆಳೆದುಕೊಳ್ಳದಂತೆ ಜುಟ್ಟು ಹಿಡಿದು ಕಾರಿನ ಗಾಜನ್ನು ಏರಿಸಿ ಕುತ್ತಿಗೆ ಸಿಗಿಸಿದನಂತೆ .ಕಿಟಕಿಯಲ್ಲಿ ಕುತ್ತಿಗೆ ಸಿಕ್ಕಿಕೊಂಡು ಎಲವಿಲ ಒದ್ದಾಡುತ್ತಿದ್ದು , ನಾಗರಾಜನ ಸಮೇತ ಕಾರು ಚಾರ್ಮುಡಿ ಕಡೆಗೆ ದೌಡಾಯಿಸುತ್ತಿದ್ದುದ್ದನ್ನು ಮೆಕ್ಕಿ ಗದ್ದೆ ಹತ್ತಿರ ನೈಟ್ ಬಸ್ಸಿಗೆ ಕಾಯುತ್ತ ನಿಂತಿದ್ದ ಕೆಲವರು ನೋಡಿರುವರೆಂದು ಹೇಳಿದನು .

27 ) ಅರಣ್ಯ ಇಲಾಖೆಯವರು ನಾಗರಾಜನನ್ನು ಕುರಿತು ಏನೆಂದು ಜಾಹೀರಾತು ನೀಡಿದರು ?

ಮೇಲಧಿಕಾರಿಗಳು ಹಾಗೂ ಊರಿನ ಜನರೆಲ್ಲ ನಿನ್ನದೆ ನಿರೀಕ್ಷೆಯಲ್ಲಿದ್ದಾರೆಂದು ನಿನ್ನ ಅರಣ್ಯ ಇಲಾಖೆಯವರು ನಾಗರಾಜನನ್ನು ಕುರಿತು ಮನೆಯವರು ವಿರುದ್ಧ ಯಾವುದೇ ಕ್ರಮ ಅಥವಾ ಷೋಕಾಸ್ ನೋಟೀಸ್ ಅಥವಾ ತನಿಖೆ ನಡೆಸುವುದಿಲ್ಲವೆಂದು ಈ ಮನವಿ ನೋಡಿದ ಕೂಡಲೇ ಎಲ್ಲಿದ್ದರೂ ಹಿಂದಿರುಗಿ ಬರುತಕ್ಕದೆಂದು ಜಾಹೀರಾತು ಕೊಟ್ಟರು .

III. ಐದಾರು ವಾಕ್ಯಗಳಲ್ಲಿ ಉತ್ತರಿಸಿ : ( ನಾಲ್ಕು ಅಂಕಗಳ ಪ್ರಶ್ನೆಗಳು )

1 ) ದುರ್ಗಪ್ಪ ನಿರೂಪಕರ ಬಳಿಗೆ ಬಂದ ಸಂದರ್ಭವನ್ನು ವಿವರಿಸಿ .

ದುರ್ಗಪ್ಪನಿಗೆ ಮರದ ಕೊಂಬೆ ಕಡಿಯಲು ಕೊಡಲಿ ಬೇಕಾಗಿತ್ತು . ಆದ್ದರಿಂದ ಆತ ನಿರೂಪಕರ ಬಳಿಗೆ ಬಂದು ತಾನು ಎಲೆಕ್ನಿಕ್ ಲೈನ್‌ಮೆನ್ ದುರ್ಗಪ್ಪನೆಂದು ತಂತಿ ಮೇಲೆ ಮರ ಮುರಕ್ಕೊಂಡು ಬಿದ್ದಿದೆ ಎಂದು ಅದನ್ನು ಕಡಿದು ಲೈನ್ ಕ್ಲಿಯರ್ ಮಾಡಬೇಕು ಎಂದು ಕೇಳಿದನು . ನಿರೂಪಕರು ಅದು ಅಟ್ಟದ ಮೇಲಿದೆ ಎಂದು ನೀನೇ ಹುಡುಕಿ ತೆಗೆದುಕೋ ಎಂದು ಹೇಳಿದರು . ದುರ್ಗಪ್ಪ ಹುಡುಕಿ ಕೊಡಲಿ ತೆಗೆದುಕೊಂಡು ಸಿಕ್ಕಿತೆಂದು ಹೇಳಿ ಹೊರಟ .

2 ) ನಿರೂಪಕರು ಕೊಡಲಿ ವಸೂಲಿ ಮಾಡಲು ಹೋಗಲಿಲ್ಲವೇಕೆ ? ವಿವರಿಸಿ .

ಕೊಡಲಿ ಸುಳ್ಳು ಹೇಳಿ ಕದ್ದುಕೊಂಡು ಹೋಗುವಷ್ಟು ಅಮೂಲ್ಯವಾದುದೇನೂ ಅಲ್ಲ . ಕೆರೆ ಕೆಲಸಕ್ಕೆಂದು ಬಂದಿದ್ದ ಮಣ್ಣು ಒಡ್ಡರು ಅಗೆಯುವಾಗ ಅಡ್ಡಾಗುವ ಬೇರುಗಳನ್ನು ಕಡಿಯಲೆಂದು ಉಪಯೋಗಿಸುತ್ತಿದ್ದರು . ಅದನ್ನು ಯರಾಬಿರಿ ಜಜ್ಜಿ ಅದರ ಹಿಂಭಾಗ ಯಾವುದು , ಮುಂಭಾಗ ಯಾವುದು ಗೊತ್ತಾಗದಷ್ಟು ಹಾಳು ಮಾಡಿದ್ದರು . ಈಗ ಅದನ್ನು ಸುತ್ತಿಗೆ ಅನ್ನಬಹುದಿತ್ತು . ಅದರಲ್ಲಿ ಮರ ಹೇಗೆ ಕಡಿಯುವನೋ ದುರ್ಗಪ್ಪ ಗೊತ್ತಾಗಲಿಲ್ಲ . ಆದ್ದರಿಂದ ನಿರೂಪಕರು ಕೊಡಲಿ ವಸೂಲಿ ಮಾಡಲು ಹೋಗಲೇ ಇಲ್ಲ.

3 ) .ಕೃಷ್ಣಗೌಡರ ಆನೆ ಹುಟ್ಟಿ ಬೆಳೆದ ಬಗೆಯನ್ನು ವಿವರಿಸಿ . ಅದು ಪೇಟೆಯಲ್ಲಿ ಏನು ಮಾಡುತ್ತಿತ್ತು ?

ಕೃಷ್ಣಗೌಡರ ಆನೆ ಹುಟ್ಟಿ ಬೆಳೆದುದು ಕಾಡಿನಲ್ಲಲ್ಲ . ಗೂಳೂರು ಮಠದಲ್ಲಿ ಹುಟ್ಟಿ ಬೆಳೆದಿದ್ದು , ಎಲ್ಲ ಊರಿನಲ್ಲಿ ಜನಗಳ ನಡುವೆಯೇ ಕೃಷ್ಣಗೌಡರು ಅದನ್ನು ಮೂಡಿಗೆರೆಗೆ ” ಕೊಂಡು ತಂದರು . ಅದು ಮೂಡಿಗೆರೆಯ ಪೇಟೆಯಲ್ಲಿ ದನಕರುಗಳ ರೀತಿಯಲ್ಲಿ ತಿರುಗಿಕೊಂಡಿತ್ತು . ಸ್ಕೂಲ್ ಮಕ್ಕಳು ಹತ್ತಿರ ಹೋಗಲು ಹೆದರಿ ದೂರದಿಂದಲೇ ‘ ಗೌರಿ ‘ ಎಂದು ಕೂಗಿದರೆ ಸಾಕು ಸೊಂಡಿಲತಿ ಸಲಾಮ್ ಮಾಡುತ್ತಿತ್ತು . ಖರ್ಚಾಗದ ಮಾಗಿದ ಹಣ್ಣುಗಳನ್ನು ಈ ಆನೆಗೆ ಕೊಡಲು ಅಂಗಡಿಯವರು ಇಟ್ಟಿರುತ್ತಿದ್ದರು . ಈ ಆನೆ ಖಾಯಂ ಆಗಿ ಎಲ್ಲಾ ಪೆಟ್ಟಿಗೆ ಅಂಗಡಿಗಳ ಬಳಿಗೂ ಹೋಗಿ ಅವನ್ನು ಸೊಂಡಿಲಲ್ಲಿ ತಗೊಂಡು ತಿನ್ನುತ್ತಿತ್ತು .

4 ) ಆನೆ ಮತ್ತು ಮಾವುತ ವೇಲಾಯುಧನನ್ನು ಸಾಗಹಾಕಲು ಮಠದವರು ಹವಣಿಸಿದ್ದೇಕೆ ?

ಮಠದ ಜಗದ್ಗುರುಗಳನ್ನು ಜನರು ಅಡ್ಡ ಪಲ್ಲಕ್ಕಿಯಲ್ಲಿ ತಮ್ಮ ಹೆಗಲ ಮೇಲೆ ಹೊರ ತೊಡಗಿದ್ದರಿಂದ ಆನೆಗೆ ಜಗದ್ಗುರುಗಳನ್ನು ಹೊರುವ ಕೆಲಸ ತಪ್ಪಿ ಹೋಯ್ತು . ಹೀಗಾಗಿ ನಿರುಪಯುಕ್ತವೆನಿಸಿದ ಈ ಆನೆಯನ್ನು ಅದಕ್ಕಿಂತ ಮುಖ್ಯವಾಗಿ ಅದರ ಮಾವುತನನ್ನು ಹೊರ ಹಾಕಿ ಕೈ ತೊಳೆದುಕೊಳ್ಳಲು ಮಠದವರು ಹವಣಿಸುತ್ತಿದ್ದರು ಆದರೆ ಮಾವುತ ವೇಲಾಯುಧನನ್ನು ಸಾಕುವುದು ಆನೆಯನ್ನು ಸಾಕುವುದಕ್ಕಿಂತ ಹೆಚ್ಚು ತ್ರಾಸದಾಯಕವಾಗಿತ್ತು . ಇಪ್ಪತ್ತನಾಲ್ಕು ಗಂಟೆಯೂ ಕುಡಿಯುತ್ತಿದ್ದು ಮಠದ ಸಾತ್ವಿಕ ವಾತಾವರಣಕ್ಕೆ ದೊಡ್ಡ ತಲೆನೋವಾಗಿತ್ತು . ಆದ್ದರಿಂದ ಅವನನ್ನು ಛೀಮಾರಿ ಹಾಕಿ ಓಡಿಸಲಾಗಿತ್ತು . ಆದರೆ ಅವನಿಲ್ಲದೆ ಆನೆ ಆಹಾರ ತ್ಯಜಿಸಿತು . ಇದರಿಂದ ಕಳವಳಗೊಂಡು ಮನಃ ಕರೆತಂದರು . ಇದರಿಂದ ವೇಲಾಯುಧನ ಕಿರುಕುಳ ಮತ್ತಷ್ಟು ಹೆಚ್ಚಾಯಿತು . ಕೃಷ್ಣಗೌಡರು ಆನೆ ಕೇಳಿದಾಗ ಮಠದವರು ಕೇವಲ ವೇಲಾಯುಧನ ಐದಾರು ಸಾವಿರ ಪಡೆದು ಅವನನ್ನು ಸಾಗಹಾಕಿದರು .

5 ) ಎಲ್ಲರ ನಿರೀಕ್ಷೆ ಸುಳ್ಳಾಗುವಂತೆ ಕೃಷ್ಣಗೌಡ ಆನೆಯನ್ನು ಹೇಗೆ ಸಾಕಿದ್ದನು ?

ಎಲ್ಲಾ ತರಹದ ವ್ಯವಹಾರಗಳನ್ನು ಮಾಡಿ ಎಲ್ಲದರಲ್ಲೂ ನಷ್ಟ ಅನುಭವಿಸಿ ಸೋತು ಹೋಗಿದ್ದ ಕೃಷ್ಣಗೌಡ ಆನೆಯನ್ನು ತಂದಾಗ ಇಲ್ಲಿಗೆ ಇವನ ಕತೆ ಮುಗಿದಂತೆಯೇ ಎಂದು ಎಲ್ಲಾ ತೀರ್ಮಾನಿಸಿದರು . ಆನೆ ಸಾಕುವುದು ಎಂದರೆ ಎಲೆಕ್ಷನ್ನಿಗೆ ನಿಂತ ಹಾಗೆ , ಮನೆ ಮಠ ಸಂಪೂರ್ಣ ಹಾಳು ಮಾಡಿಕೊಂಡು ಹೆಂಡತಿ ಮಕ್ಕಳ ಪಾಲಿಗ ಮಣ್ಣು ಹಾಕುವ ಕ್ಷಿಪ್ತ ಮಾರ್ಗ ಎಂದು ಎಲ್ಲರೂ ದೃಢವಾಗಿ ನಂಬಿದ್ದರು . ಆದರೆ ಆನೆಗೆ ಬದನೆಸೊಪ್ಪು , ಹಸಿಹುಲ್ಲು , ಹಿಂಡಿ , ಬೆಲ್ಲ , ಗೆಣಸು ಎಲ್ಲ ಕೊಟ್ಟು ಕೃಷ್ಣಗೌಡ ಆಗಿದ್ದು ಬೇರೆ ರೀತಿ , ಮಠದಲ್ಲಿ ಬರಿ ಒಣಹುಲ್ಲು ಮೊಸರನ್ನ ತಿಂದು ಸೊರಗಿದ್ದ ಪಗಡುದಸ್ತಾಗಿ ಬೆಳೆಸಿದ .

6 ) ಕಾಡಾನೆಗಳ ಹಾವಳಿ ನಿರೂಪಕರ ಅನುಭವಕ್ಕೆ ಬಂದುದು ಹೇಗೆ ?

ಕಾಡಾನೆಗಳು ನಿರೂಪಕರ ತೋಟಕ್ಕೆ ನುಗ್ಗಿ ಹಾಳು ಮಾಡಿದ್ದವು . ನೀರಿನ ಪೈಪು ಪುಡಿಪುಡಿಯಾಗಿ ಬಹಳ ಆಳದವರೆಗೂ ( ಪಾತಾಳದವರೆಗೂ ) ಹುದುಗಿ ಹೋಗಿದ್ದು ನೋಡಿದ ಮೇಲೆ ಜನರು ಆನೆಕಾಟ ಎಂದು ಕೂಗಾಡುವವರೆಗೂ ಕಾಡಾನೆಗಳ ಹಾವಳಿ ನಿರೂಪಕರ ಅನುಭವಕ್ಕೆ ಬಂದಿರಲಿಲ್ಲ .

7 ) ಅರಣ್ಯ ಇಲಾಖೆಯ ಶತ್ರುಗಳ ಕಾರ್ಯಭಾರವನ್ನು ನಾಗರಾಜ ವಿವರಿಸಿದ್ದು ಹೇಗೆ ?

ಅರಣ್ಯ ಇಲಾಖೆಯ ಶತ್ರುಗಳೆನಿಸಿದ್ದ ಪಿ.ಡಬ್ಲೂ.ಡಿ ಇಲಾಖೆಯವರು ಡಾಂಬರು ಹಾಕುವ ನೆಪದಲ್ಲಿ ರಸ್ತೆ ವಿಸ್ತರಿಸುವ ನೆಪದಲ್ಲಿ ಮರಗಳನ್ನು ಕಡಿಯುವ ಕಾರ್ಯಭಾರ ನಡೆಸುವರೆಂದು ಇನ್ನು ಎಲೆಕ್ನಿಕ್ ಇಲಾಖೆಯವರು , ದೂರವಾಣಿ ಇಲಾಖೆಯವರು , ಕೇಬಲ್‌ನವರು ತಂತಿಗಳನ್ನು ಎಳೆಯಲು ಮರಕಡಿಯುವರೆಂದು ನಾಗರಾಜ ವಿವರಿಸಿದನು .

8 ) ನಿದ್ರೆ ಮಂಪರಿನಲ್ಲಿದ್ದ ಡ್ರೈವರ್ ಪರಂಧಾಮಕ್ಕೆ ಹೋದ ಸಂದರ್ಭವನ್ನು ವಿವರಿಸಿ ,

ನಿದ್ರೆ ಮಂಪರಿನಲ್ಲಿ ಡ್ರೈವರ್ ಸ್ಟೇರಿಂಗ್‌ನ ಮೇಲೆ ತಲೆ ವಾಲಿಸಿಕೊಂಡು ಮಲಗಿದ್ದನು . ಲಾರಿಗೂ – ನಾಟಗಳಿಗೂ ಹಗ್ಗ ಬಿಗಿದು ಕಟ್ಟಿದು ಬಿಚ್ಚಬೇಕೆಂದು ಮರೆತ ಹೋಯ್ತು . ಆನೆಗೆ ಮರದ ದಿಮ್ಮಿಗಳನ್ನು ಉರುಳಿಸಲು ಹೇಳಿದ . ಲಾರಿ ಸಮೇತ ಮರದ ದಿಮ್ಮಿಗಳು ಉರುಳಿತು . ಕ್ಯಾಬಿನ್ನಿನಲ್ಲಿ ಇಟ್ಟಿದ್ದ ಮಣಭಾರದ ಲಾರಿ ಜಾಕ್ ದೊಪ್ಪನೆ ಅವನ ಬುರುಡೆಯ ಮೇಲೆ ಬಿದ್ದ ಹೊಡೆತಕ್ಕೆ ಅವನ ತಲೆ ಜಜ್ಜಿ ಕಮಕ್ ಕಿಮಕ್ ಎನ್ನದೆ ಪರಂಧಾಮಕ್ಕೆ ಹೋದ .

9 ) ಡ್ರೈವರ್ ಸಾವಿನ ಸುದ್ದಿಯನ್ನು ಶಿವೇಗೌಡ ಮತ್ತಿತರರು ಹೇಗೆ ಮುಚ್ಚಿ ಹಾಕಿದರು ?

ಡ್ರೈವರ್ ಸಾವಿನ ಸುದ್ದಿಯನ್ನು ಶಿವೇಗೌಡ ಮತ್ತಿತರರು ಪಿಸುಮಾತಿನಲ್ಲಿ ಮುಚ್ಚಿಹಾಕಿದರು . ಯಾರು ದೂರು ಕೊಡಲಿಲ್ಲವಾದ್ದರಿಂದ ಕಾನೂನಿನ ಕ್ರಮ ಜಾರಿ ಆಗಲಿಲ್ಲ . ಅಲ್ಲದೆ ಲಾರಿ ಏನೂ ಆಗೆ ಇಲ್ಲ ಎಂಬಂತೆ ಸರಿಯಾಗಿ ನಿಂತಿತ್ತು ಡ್ರೈವರ್ ಹೋದ ಕಡೆಯಲೆಲ್ಲ ಒಂದೊಂದು ಸಂಸಾರವಿದ್ದುದರಿಂದ ಕ್ಲೀನರ್ ಕೂಡ ಯಾರಿಗೂ ಹೇಳಲಿಲ್ಲ . ಮರದೊಂದಿಗೆ ಹಣವನ್ನು ಸುಟ್ಟು ಬೂದಿ ಮಾಡಿದರು .

10 ) ದುರ್ಗಪ್ಪನಿಗೆ ಲೈನ್‌ಮೆನ್ ಕೆಲಸ ರೋಸಿ ಹೋಗಲು ಕಾರಣಗಳೇನು ?

ದುರ್ಗಪ್ಪನಿಗೆ ಲೈನ್‌ಮೆನ್ ಕೆಲಸ ರೋಸಿ ಹೋಗಿತ್ತು . ಕಾರಣವೆಂದರೆ “ ಅವನಿಗೆ ಶಿವೇಗೌಡರ ಸಾಮಿಲ್ಲಿನ ಎದುರು ಹೋಗಿದ್ದ ಕಳಸಾ ಲೈನು ನೋಡಿಕೊಳ್ಳಲು ಕೊಟ್ಟಿದ್ದರು . ಆ ವಿದ್ಯುತ್ ಲೈನ್ ಇಡೀ ಮೂಡಿಗೆರೆಗೆ ತರಲೆ ಲೈನು ಎಂದು ಹೆಸರುವಾಸಿಯಾಗಿತ್ತು . ಒಂದು ಕಡೆ ಹಳೆಕೋಟೆ , ಗೌಡಳ್ಳಿ , ಬೈರಾಪುರದವರೆಗೆ ಇನ್ನೊಂದು ಕಡೆ ಬಣದಲ್ಲಿ ನಿಡುವಾಳೆ , ಜಾವಳಿವರೆಗೆ , ಎಲ್ಲೆಲ್ಲೋ ಕಗ್ಗಾಡಿನ ನಡುವೆ ಎಲ್ಲಾ ನುಗ್ಗಿ ನುಸುಳಿ ಹೋಗಿತ್ತು . ಆ ದರಿದ್ರ ಲೈನಿನ ಯೋಗಕ್ಷೇಮ ನೋಡಿಕೊಳ್ಳಲು ಹೋಗಿ ಅವನಿಗೆ ಬದುಕಿನ ಆಸೆಯೇ ಬತ್ತಿ ಹೋಗಿತ್ತು . ಯಾವ ಮೂಲೆಯಲ್ಲಿ ಕೊಂಬೆ ಮುರಿದು ಬೀಳಲಿ ಎಲ್ಲ ಲೈನಿಗೆ ಬಾವಲಿಗಳು ಸಿಕ್ಕಿಕೊಳ್ಳಲಿ ಇಡೀ ಲೈನು ಕಟ್ಟಾಗುತ್ತಿತ್ತು . ಬೆಳಿಗ್ಗೆ ಎದ್ದು ದುರ್ಗಪ್ಪ ತಂತಿ ಸುರುಳಿ ಕಟಿಂಗ್ ಪ್ಲೇಯರು ಹಿಡಿದು ಎಲ್ಲಿ ಟ್ರಬಲ್ ಎಂದು ಹುಡುಕಿ ಹೊರಡುತ್ತಿದ್ದ . ಜನಕ್ಕಾಗಲಿ ಡಿಪಾರ್ಟ್‌ಮೆಂಟಿನಲ್ಲಿ ಇರುವವರಿಗಾಗಲಿ , ಫಾರಿಸ್ಟಿನವರಿಗಾಗಲಿ ಈತನ ಕಷ್ಟದ ಬಗ್ಗೆ ಗೊತ್ತಾಗದೆ ನಾಗರಾಜ ಸೌದೆ ಮಾರುತ್ತಾರೆ ಎಂದು ಜರದರೆ , ಡಿಪಾರ್ಟ್‌ಮೆಂಟಿನವರು ಲೈನ್ ಸರಿಯಾಗಿ ಮೆಂಟೇನ್ ಮಾಡಿಲ್ಲ ಎಂದು ಬಯ್ಯುತ್ತಿದ್ದರು .

11 ) ಪೋಸ್ಟ್‌ಮ್ಯಾನ್ ಜಬ್ಬರನ ಬವಣೆಯನ್ನು ನಿರೂಪಕರು ಹೇಗೆ ವಿವರಿಸಿದ್ದಾರೆ ?

ಮೂಡಿಗೆರೆಯಂಥ ಕುಗ್ರಾಮ ಆಧುನಿಕರಣಗೊಳ್ಳುತ್ತಿರುವಂತೆ ಪೋಸ್ಟಲ್ ಡಿಪಾರ್ಟ್‌ಮೆಂಟಿನವರು ತಮ್ಮ ಸೇವೆಯನ್ನು ವಿವರಿಸುತ್ತಿದ್ದರು . ಹ್ಯಾಂಡ್ ಪೋಸ್ಟ್ ಬಿದಿರಳ್ಳಿ ಇಲ್ಲೆಲ್ಲ ಒಂದೊಂದು ಕೆಂಪು ಪೋಸ್ಟ್ ಬಾಕ್ಸ್‌ಗಳನ್ನು ನೇತು ಹಾಕಿದರು . ಪೋಸ್ಟಾಫಿಸ್‌ನ ಶಾಖೆ ತೆರೆಯುವ ಬದಲು ಪೋಸ್ಟ್ ಬಾಕ್ಸ್ ನೇತು ಹಾಕುವುದು ಕಡಿಮೆ ಖರ್ಚಿನವಾದ್ದರಿಂದ ಬಾಕ್ಸ್‌ಗಳು ನೇತಾಡುತ್ತಿದ್ದವು . ಪೋಸ್ಟ್‌ಮನ್ ಜಬ್ಬರನು ಪೋಸ್ಟ್ ಕೊಡುವುದೇ ಅಲ್ಲದೇ ಪ್ರತಿದಿನ ಪೋಸ್ಟ್‌ಬಾಕ್ಸ್ ಇರುವವರೆಗೂ ಹೋಗಿ ಸಾ ಪೋಸ್ಟ್ ಸಂಗ್ರಹಿಸಿ ಹೆಡ್ಡಾಫೀಸಿಗೆ ಕೊಡಬೇಕಾಗಿತ್ತು . ಸೈಕಲಿನಲ್ಲಿ ಅಷ್ಟು ದೂರ ಹೋಗಿ ಬರುವುದು ಕಷ್ಟವಾಗುತ್ತಿತ್ತು . ಸಾಲ ಮಾಡಿ ಲೂನಾ ತೆಗೆದುಕೊಂಡು ಸುತ್ತತೊಡಗಿದ .

12 ) ಪುಟ್ಟಯ್ಯ ತನ್ನ ಅಸಹಾಯಕತೆಯನ್ನು ಹೇಗೆ ವಿವರಿಸುತ್ತಾನೆ ?

ಪುಟ್ಟಯ್ಯ ತನ್ನ ಅಸಹಾಯಕತೆಯನ್ನು ಹೀಗೆ ವಿವರಿಸಿದ್ದಾನೆ . “ ಸಾವಿರಾರು ರೂಪಾಯಿ ಬೆಲೆಬಾಳುವ ಔಷಧಿಗಳನ್ನು ರೆಫಿಜಿರೇಟರ್‌ನಲ್ಲಿ ಇಟ್ಟಿರುತ್ತೇನೆ . ವಾರದಿಂ ಕರೆಂಟ್ ಇಲ್ಲದಿದ್ದಲ್ಲಿ ಆ ಔಷಧಿಗಳ ಪವರ್‌ ಕಡಿಮೆಯಾಗುತ್ತದೆ . ಈ ಎಲೆಕ್ನಿಕ್‌ನವರು ಯಾರಾರಿಗೆ ಎಷ್ಟೆಷ್ಟು ನಷ್ಟ ಆಗುತ್ತೆ ಅಂತ ಯೋಚಿಸುವುದಿಲ್ಲ . ಹುಚ್ಚು ನಾಯಿ ಕಚ್ಚಿದ ಸುಮಾರು ದನಗಳು ಬಂದಿದ್ದು ರೆಫ್ರಿಜರೇಟರ್ ಕೆಟ್ಟು ಹೋಗಿ ಸಿರಂ ಕೆಟ್ಟುಹೋಗಿದೆ . ಹೊಸದು ಕಳುಹಿಸಲು ಇಲಾಖೆಗೆ ಇಂಡೆಂಟ್ ಕಳುಹಿಸಲಾಗಿದೆ . ಯಾವಾಗ ಕಳುಹಿಸುತ್ತಾರೋ ನೋಡಬೇಕು ಎಂದು ಪುಟ್ಟಯ್ಯ ತನ್ನ ಅಸಹಾಯಕತೆಯನ್ನು ವಿವರಿಸಿದನು .

13 ) ಬೀದಿನಾಯಿಗಳ ನಿವಾರಣೆಗೆ ಖಾನ್ ಸಾಹೇಬರು ತೆಗೆದುಕೊಂಡಿದ್ದ ಕ್ರಮಗಳಾವುವು ?

ಬೀದಿ ನಾಯಿಗಳ ನಿವಾರಣೆಗೆ ಖಾನ್ ಸಾಹೇಬರು ತೆಗೆದುಕೊಂಡಿದ್ದ ಕ್ರಮಗಳೆಂದರೆ ‘ ಬೀದಿ ನಾಯಿಗಳನ್ನು ಶೂಟ್ ಮಾಡಿದ್ದರು . ಪಾಯಿಸನ್ ಹಾಕಿ ಸಾಯಿಸಿದ್ದೇವೆ ‘ ಎಂದರು . ಮುನಿಸಿಪಲ್ ವತಿಯಿಂದ ಹುಚ್ಚನಾಯಿ ಇಂಜಕ್ಷನ್ ತರಿಸಿ ಕಟ್ಟಿಕೊಂಡೋರಿಗೆಲ್ಲ ಬಿಟ್ಟಿ ಚುಚ್ಚುಸ್ತಾರಂತೆ ಎಂಬ ಕ್ರಮಗಳು ಇದ್ದವು .

14 ) ಟೆಲಿಫೋನ್ ಲೈನ್‌ಮೆನ್ ತಿಪ್ಪಣ್ಣನ ಸಾವಿನ ಸಂದರ್ಭವನ್ನು ವಿವರಿಸಿ .

ಟೆಲಿಫೋನ್ ಲೈನ್‌ಮೆನ್‌ ತಿಪ್ಪಣ್ಣ ನುಗ್ಗೆಹಳ್ಳಿಯ ಲೈನ್‌ಗಳು ಡೆಡ್ಡಾಗಿವೆ ಎಂದು ಹೇಳಿದಾಗ ಜಂಕ್ಷನ್ ಬಾಕ್ಸ್ ಪರಿಶೀಲನೆ ಮಾಡಲು ಕಂಬ ಹತ್ತಿದ . ಸುಮಾರು ಮೂವತ್ತು – ನಲವತ್ತು ತಂತಿಗಳ ತೊಡಕಿನೊಳಗೆ ನುಸುಳಿ ತಿಪ್ಪಣ್ಣ ಜಂಕ್ಷನ್ ಬಾಕ್ಸನ್ನು ಸ್ಕೂಡ್ರೈವರ್ ಮೀಟುತಿರಬೇಕಾದರೆ ಅಷ್ಟು ತಂತಿಗಳಲ್ಲಿ ಎಲೆಕ್ನಿಕ್ ವೈರುಗಳು ಇದ್ದು ಶಾಕ್‌ನಿಂದ ಅಲ್ಲಿ ಸತ್ತು ಹೋದನು .

15 ) ಡ್ರೈವರ್ ಅಬ್ಬಾಸ್ ಮತ್ತು ಕ್ಲಿನರ್ ಕೃಷ್ಣನ ಸಾವಿಗೆ ಕೃಷ್ಣಗೌಡರ ಆನೆ ಕಾರಣವೆ ವಿವರಿಸಿ .

ಡ್ರೈವರ್ ಅಬ್ಬಾಸ್ ಮತ್ತು ಕ್ಲೀನರ್ ಕೃಷ್ಣನ ಸಾವಿಗೆ ಕೃಷ್ಣಗೌಡರ ಆನೆ ಖಂಡಿತ ಕಾರಣವಲ್ಲ . ಮರದ ಬುಡದಲ್ಲಿದ್ದ ಆನೆಯ ಹೆಜ್ಜೆಗುರುತಿನಿಂದ ಈ ತೀರ್ಮಾನಕ್ಕೆ ಬರುವುದು ತಪ್ಪು . ಡ್ರೈವರ್ ಅಬ್ಬಾಸನ ಬೀಡಿ ಸೇದುವ ಚಟದಿಂದಾಗಿ ಅವರ ಸಾವಿಗೆ ಅವನೇ ಮುಖ್ಯ ಕಾರಣವಾದರೆ ಕೃಷ್ಣನು ಸ್ಟೇಡಿ ತಿರುಗಿಸುತ್ತ ಡ್ರೈವರ್ ಆಗುವ ಬಯಕೆ ಹೊಂದಿದವನೋ ಏನೋ ? ಗೋಣಿ ಮರಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಅಬ್ಬಾಸ್ ಬ್ರೇಕ್ ಹಾಕದೆ ಬೀಡಿ ಸೇವನೆಯ ಉನ್ಮಾನದಿಂದ ತನ್ನ ಸಾವನ್ನು ತಾನೇ ತಂದುಕೊಂಡನು . ಮರದ ದಿಮ್ಮಿಗಳಿಗೂ ಮರಕ್ಕೂ ನಡುವೆ ಸಿಲುಕಿ ಇಬ್ಬರು ಸತ್ತರು .

16 ) ವೇಲಾಯುಧನ ಹೆಂಡತಿಗೆ ಆನೆಯ ಬಗ್ಗೆ ಸವತಿ ಮಾತ್ಸರ ಮೂಡಲು ಕಾರಣಗಳೇನು ?

ವೇಲಾಯುಧ ದಿನಾ ರಾತ್ರಿ ವೇಳೆ ಆನೆಯ ಜೊತೆ ಶಿವೇಗೌಡರ ಸಾಮಿಲ್ಲಿಗೆ ಹೋಗುತ್ತಿದ್ದನು . ಕಳ್ಳ ಸಾಗಾಣಿಕೆ ರಾತ್ರಿ ವೇಳೆಯಲ್ಲಿಯೇ ನಡೆಯುತ್ತಿರುವುದರಿಂದ ಅವನು ಹೆಚ್ಚು ಹೊತ್ತು ಆನೆಯ ಜೊತೆ ಕಳೆಯುತ್ತಿದ್ದರಿಂದ ದಾಂಪತ್ಯ ಸುಖವನ್ನು ಅನುಭವಿಸದ ವೇಲಾಯುಧನ ಹೆಂಡತಿ ಆನೆಯ ಬಗ್ಗೆ ಸವತಿ ಮಾತ್ಸರ ತೋರಿದಳು .

17 ) ನಾಗರಾಜನ ನಿಗೂಢ ಸಾವಿನ ಬಗ್ಗೆ ಜನರ ಅಭಿಪ್ರಾಯಗಳೇನು ?

ನಾಗರಾಜ ಆನೆ ಶಿಕಾರಿಗಾಗಿ ಶಿಕಾರಿಗರಡಿಯಲ್ಲಿ ರಾತ್ರಿ ವೇಳೆ ಕಾಯುತ್ತ ಕುಳಿತಿರಲು ರಾಮಪ್ಪ ಬಂದು ಆನೆ ಬೇಲಿ ದಾಟಿ ಹೋಯ್ತು ಸಾರ್ ಎಂದು ಹೇಳಿದಾಗ ಆತ ಹೇಳಿದ ದಿಕ್ಕಿನಲ್ಲಿ ಹೋದ ನಾಗರಾಜ ಹಿಂತಿರುಗಲೇ ಇಲ್ಲ . ಆದರೆ ಜನರೆಲ್ಲ ಕೃಷ್ಣಗೌಡನ ಆನೆ ನಾಗರಾಜನನ್ನು ಸಾಯಿಸಿದೆ ? ಅಥವಾ ಕಾಡಾನೆಗಳು ಸಾಯಿಸಿದವೆ ? ಮೊದಲಿಗೆ ವೇಲಾಯುಧನ ಹೆಣವನ್ನು ನಾಗರಾಜನ ಹೆಣ ಎಂದು ಅಭಿಪ್ರಾಯಪಟ್ಟರು . ಮತ್ತೆ ಕೆಲವರು ಕೇಡಿಗಳು ಕಾರಿನಲ್ಲಿ ಚಾರ್ಮುಡಿಯತ್ತ ಕರೆದೊಯ್ದು ಕೊಂದಿರಬಹುದೆಂದು ತಿಳಿಸಿದರು . ಕೆಲವರು ನಾಗರಾಜ ಆತ್ಮಹತ್ಯೆ ಮಾಡಿಕೊಂಡನೆಂದು , ಮತ್ತೆ ಕೆಲವರು ಧರ್ಮಸ್ಥಳಕ್ಕೆ ಹೋಗಿ ಬದಲಾದನೆಂದು ಹಲವಾರು ರೀತಿಯಲ್ಲಿ ಅಭಿಪ್ರಾಯಪಟ್ಟರು .

18 ) ತನ್ನ ಆನೆಯ ಬಗ್ಗೆ ಕೃಷ್ಣಗೌಡನಲ್ಲಿ ಬೇಸರ ಮೂಡಲು ಕಾರಣವೇನು ?

ತನ್ನ ಆನೆಯ ಬಗ್ಗೆ ಕೃಷ್ಣಗೌಡನಲ್ಲಿ ಬೇಸರ ಮೂಡಿತು . ಪ್ರತಿಯೊಂದು ಅನಾಹುತದಲ್ಲಿಯೂ ಎಲ್ಲರೂ ಕೃಷ್ಣಗೌಡರ ಆನೆ ಎಂದು ಬೆರಳು ಮಾಡಿ ತೋರಿಸುತ್ತಿದ್ದರು . ಡ್ರೈವರ್ ಸಾವು , ಅಬ್ಬಾಸ್ ಡ್ರೈವರ್ , ಕ್ಲೀನರ್ ಕೃಷ್ಣನ ಸಾವಿಗೆ ಈ ಆನೆಯೇ ಕಾರಣವೆಂದು ದೂರಿದರು . ಅಲ್ಲದೆ ಅಂತ್ಯದಲ್ಲಿ ಸಾಕಿದ ಮಾಲೀಕನಂತಿದ್ದ ವೇಲಾಯುಧನನ್ನೇ ಕೊಂದಿದೆ ಎಂದೂ ನಾಗರಾಜನನ್ನು ಇದೇ ಕೊಂದಿರಬಹುದು , ಹಾಗೂ ಸುಬ್ಬಣ್ಣನ ಕೊಟ್ಟಿಗೆ ಬಿದ್ದಿದ್ದಕ್ಕೂ ಕುರಿಗಳ ಸಾವಿಗೂ ಇದೇ ಕಾರಣ ಎಂದು ದೂರುತ್ತಿದ್ದುದರಿಂದ ಆನೆಯ ಬಗ್ಗೆ ಕೃಷ್ಣಗೌಡನಿಗೆ ಬೇಸರ ಉಂಟಾಯಿತು.

19 ) ‘ ಕೃಷ್ಣಗೌಡನ ಆನೆ ‘ ಕಥೆಯಲ್ಲಿ ಬರುವ ಭ್ರಷ್ಟ ವ್ಯವಸ್ಥೆಯ ಚಿತ್ರಣವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ

ಕೃಷ್ಣಗೌಡನ ಆನೆ ‘ ಕಥೆಯಲ್ಲಿ ಬರುವ ಭ್ರಷ್ಟಾಚಾರದ ವ್ಯವಸ್ಥೆಯ ಚಿತ್ರಣವನ್ನು ನಾವು ಶಿವೇಗೌಡರ ಸಾಮಿಲಿನಲ್ಲಿ ರಾತ್ರೋರಾತ್ರಿ ನಡೆಯುವ ಮರಗಳನ್ನು ಕಡಿದು ಸಾಗಿಸುವ ಕಾರ್ಯ ಇದಕ್ಕೆ ಸಾಕ್ಷಿಯಾಗಿದೆ . ಊರಿನಲ್ಲಿ ಮೂಡಿಗೆರೆಯಲ್ಲಿ ಆಗು ಎಲ್ಲ ದುರಂತಗಳಿಗೆ , ಅನಾಹುತಗಳಿಗೆ , ಸಾವುಗಳಿಗೆ , ಕಳ್ಳಸಾಗಾಣಿಕೆ , ಗಂಧ ಸಾಗಾಣಿಕೆ ತಮ್ಮ ಕರ್ತವ್ಯಗಳನ್ನು ಪಾಲಿಸದೆ ಪ್ರತಿಯೊಂದು ಇಲಾಖೆಯು ಒಬ್ಬರು ಇನ್ನೊಬ್ಬರ ಆ ಊರಿನ ದೊಡ್ಡ ಮನುಷ್ಯರ ದುರಾಸೆ , ಭ್ರಷ್ಟಾಚಾರಗಳಿಗೆ ಕಾರಣವಾಗಿದೆ . ಇಲಾಖೆಗ ಮೇಲೆ ಹೇರುವುದು ಇಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ . ಇದಕ್ಕೆ ಸಾಕ್ಷಿಯಾಗಿ ಫಾರೆಸ್ಟ್ ಆಫೀಸರ್ ಸ್ಟೇಷನ್ ಮುಂದೆ ನಿಲ್ಲಿಸಿದ ತುಕ್ಕು ಹಿಡಿದ ಕಾರುಗಳು , ಹುತ್ತ ಬೆಳೆದ ಕಾರುಗಳು , ಬಳ್ಳಿ ಹಬ್ಬಿದ ಕಾರುಗಳು , ಇವೆಲ್ಲ ಭ್ರಷ್ಟಾಚಾರದಲ್ಲಿ ತೊಡಗಿದ್ದವು ಎಂದು ಅವುಗಳನ್ನು ಮುಖ್ಯ ಸಾಕ್ಷಿಯಾಗಿ ಹಿಡಿದು ತಂದುದಾಗಿದೆ .

20 ) ಆನೆಯು ಇಲ್ಲಿ ಬಾಯಿಲ್ಲದ ಜನರ ಸಂಕೇತವಾಗಿರುವುದನ್ನು ವಿಶ್ಲೇಷಿಸಿ ,

‘ಕೃಷ್ಣಗೌಡನ ಆನೆ ‘ ಕಥೆಯಲ್ಲಿ ಆನೆ ಇಲ್ಲಿ ಬಾಯಿಲ್ಲದ ಜನರ ಸಂಕೇತವಾಗಿದೆ . ಪುಟ್ಟಮಕ್ಕಳು ಪ್ರೀತಿಯಿಂದ ‘ ಗೌರಿ ‘ ಎಂದು ಕರೆದಾಗ ಅದು ಕೂಗಿ ಸಲಾಮ್ ಮಾಡುವುದನ್ನು ನೋಡಿದಾಗ ಆನೆಯ ಪ್ರೀತಿ – ವಿಶ್ವಾಸ ಮುಗ್ಧತೆ ಗೋಚರವಾಗುತ್ತದೆ . ಆದರೆ ನರಪೇತಲನಂತಹ ವೇಲಾಯುಧನ ಮಾತುಗಳನ್ನು ಬಲಭೀಮನಾಗಿರುವ ಆನೆ ಹೇಳಿದಂತೆ ಕೇಳುವ ಸ್ವಾಮಿನಿಷ್ಠೆ ಇಲ್ಲಿ ಕಂಡುಬರುತ್ತದೆ . ಆದರೆ ಊರಿನಲ್ಲಿ ಆಗುವ ದುರಂತಗಳಿಗೆಲ್ಲ ಈ ಆನೆಯೇ ಕಾರಣ ಎಂದು ದೂರಿರುವುದು ಬಾಯಿಲ್ಲದ ಮೂಕ ಪ್ರಾಣಿಯ ಮೇಲಿನ ಆರೋಪವಾಗಿದೆ . ಲಾರಿಗೂ ದಿಮ್ಮಿಗಳಿಗೆ ಕಟ್ಟಿದ ನಾಟು ಬಿಚ್ಚದೆ ಇದ್ದುದು ಕ್ಲಿನರ್ ಹಾಗೂ ವೇಲಾಯುಧನ ತಪ್ಪೇ ಹೊರತು ಆನೆಯದಲ್ಲ . ಅಬ್ಬಾಸನಿಗೆ ಬೀಡಿ ಸೇದುವ ಕೆಟ್ಟ ಚಟದಿಂದ ಆತನ ಹಾಗೂ ಕ್ಲಿನರ್ ಕೃಷ್ಣನ ಸಾವಿಗೆ ಕಾರಣವಾಯಿತು . ಸುಬ್ಬಣ್ಣನ ಕೊಟ್ಟಿಗೆ ದುರಂತಕ್ಕೆ ಕಾಡಾನೆಗಳ ಕಾರಣವಿರಬಹುದು , ದುಷ್ಕರ್ಮಿಗಳ ಕಾರಣವು ಇರಬಹುದು , ಆಹಾರ ಹುಡುಕಿ ಹೊರಟ ಕಾಡಾನೆಗಳ ಹೆಜ್ಜೆ ಗುರುತಿನಿಂದ ಬಿದ್ದ ಲದ್ದಿಯಿಂದ ಆಗುವ ಎಲ್ಲ ಅನಾಹುತಗಳಿಗೂ , ದುರಂತಗಳಿಗೂ ಆನೆಯನ್ನು ದೂಷಿಸಿರುವುದು ಬಾಯಿಲ್ಲದ ಜನರ ಸಂಕೇತವಾಗಿದೆ .

IV. ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ಬರೆಯಿರಿ :

1. ನಮ್ಮ ಕಡೆ ಕೆಮ್ಮು ಕಾಲಿಂಗ್ ಬೆಲ್ ಇದ್ದಹಾಗೆ .

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ ಕೃಷ್ಣಗೌಡನ ಆನೆ ‘ ಕಥೆಯ ಮೊದಲ ಅಧ್ಯಾಯದ ಆರಂಭದಲ್ಲಿ ಬರುವ ವಾಕ್ಯವಿದು . ಅಲ್ಲಿಗೆ ಬಂದ ಎಲೆಕ್ನಿಕ್‌ ಲೈನ್‌ಮನ್ ದುರ್ಗಪ್ಪ ನಿರೂಪಕರ ಗಮನ ಸೆಳೆಯಲ ನಿರೂಪಕರು ಜೀಪಿನ ಅಡಿ ಮಲಗಿ ರಿಪೇರಿ ಕೆಲಸದಲ್ಲಿ ತೊಡಗಿರುವಾ ಒಂದೆರಡು ಭಾರಿ ಕೆಮ್ಮಿದನು . ಆ ಸಂದರ್ಭದಲ್ಲಿ ನಿರೂಪಕರು ಈ ಮೇಲಿನ ವನ್ನಾಡಿದ್ದಾರೆ . ಮನೆ ಬಳಿ ಯಾರೂ ಕಣ್ಣಿಗೆ ಬೀಳದಿದ್ದಾಗ ಅಲ್ಲಿಗೆ ಬಂದವರು ಕೆ ಕ್ಯಾಕರಿಸಿ ಗಲಾಟೆ ಮಾಡಿ ಮನೆಯವರ ಗಮನ ಸೆಳೆಯಲು ಪ್ರಯತ್ನಿಸುವುದು ನಿರೂಪಕರು “ ನಮ್ಮ ಕಡೆ ಕೆಮ್ಮು ಕಾಲಿಂಗ್‌ಬೆಲ್ ಇದ್ದಹಾಗೆ ”ಎಂದು ವಿವರಿಸಿದ್ದಾರೆ .

2. ಆನೆ ಸಾಕುವುದು ಎಂದರೆ ಎಲೆಕ್ಷನ್ನಿಗೆ ನಿಂತ ಹಾಗೆ . .

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ ಕೃಷ್ಣಗೌಡನ ಆನೆ ‘ ಎಂ ನೀಳ್ಗತೆ ಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಕೃಷ್ಣಗೌಡ ಎಲ್ಲ ತರಹದ ವ್ಯವಹಾರಗಳಲ್ಲೂ ನಷ್ಟ ಅನುಭವಿಸಿದ್ದನ್ನು ಊರ ಜನ ಬಲ್ಲವರಾಗಿದ್ದರು . ಆತ ಗೂಳೂರು ಮಠದಿಂದ ಆನೆಯನ್ನು ಕರೆತಂದಾಗ ಇಲ್ಲಿಗೆ ಆತನ ಕಥೆ ಮುಗಿದಂತೆಯೇ ಎಂದು ಎಲ್ಲರೂ ಭಾವಿಸಿದರು . ಏಕೆಂದರೆ ಆನೆ ಸಾಕುವುದು ಎಂದರೆ ಎಲೆಕ್ಷನ್ನಿಗೆ ನಿಂತ ಹಾಗೆಯೇ ! ಮನೆ ಮಠ ಸಂಪೂರ್ಣ ಹಾಳುಮಾಡಿಕೊಂಡು ಹೆಂಡತಿ ಮಕ್ಕಳ ಬಾಯಿಗೆ ಮಣ್ಣು ಹಾಕುವ ಹತ್ತಿರದ ದಾರಿಯಿದೆಂದು ಎಲ್ಲರೂ ನಂಬಿದ್ದರು . ಆದರೆ ಅವರ ನಂಬಿಕೆ ಸುಳ್ಳಾಗುವಂತೆ ಕೃಷ್ಣಗೌಡ ಆನೆ ತಂದ ಮೇಲೆ ಶ್ರೀಮಂತನಾಗುತ್ತಾ ನಡೆದ .

3. ಆನೆಗೂ ಮಾನ ಮರ್ಯಾದೆ ಇರುತ್ತೆ ತಿಳುಕೊ

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ ಕೃಷ್ಣಗೌಡನ ಆನೆ ‘ ಎಂಬ ನೀಳ್ಗತೆ ಯಲ್ಲಿ ಜನರು ರೆಹಮಾನನಿಗೆ ಹೇಳುವ ಮಾತಿದು . ರೆಹಮಾನನ ಅಂಗಡಿಯನ್ನು ಆನೆ ದೂಡಿ ಬೀಳಿಸಲು ಕಾರಣ ಆತ ಆನೆಯ ಮರ್ಮಾಂಗಕ್ಕೆ ಬೈಯ್ದದೆಂದು ರೆಹಮಾನನ ಹೆಂಡತಿ ಜುಬೇದಾಳು ಎಲ್ಲರೆದುರಿಗೆ ಸಾಕ್ಷಿ ನುಡಿದಾಗ ಜನರೆಲ್ಲಾ ಆನೆಯನ್ನು ಬೈಯ್ದ ರೆಹಮಾನನನ್ನುದ್ದೇಶಿಸಿ “ ಆನೆಗೂ ಮಾನ ಮರ್ಯಾದೆ ಇರುತ್ತೆ ತಿಳಿದುಕೋ ” ಎಂದು ಬೈಯ್ದರಲ್ಲದೆ ಆನೆಗೂ ಒಂದು ವ್ಯಕ್ತಿತ್ವವನ್ನು ಆರೋಪಿಸಿದರೆಂದು ನಿರೂಪಕರು ಹೇಳಿದ್ದಾರೆ .

4. “ ನನ್ನ ಕೊಡಲಿ ಯಾಕೆ ತಂದು ಆಫೀಸಿನಲ್ಲಿ ಇಡ್ಕೊಂಡಿದ್ದೀರ ? ”

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ ಕೃಷ್ಣಗೌಡನ ಆನೆ ‘ ಎಂಬ ನೀಳ್ಗತೆ ಯಲ್ಲಿ ನಿರೂಪಕರು ಫಾರೆಸ್ಟರ್ ನಾಗರಾಜನನ್ನು ಈ ಮೇಲಿನಂತೆ ಕೇಳುವರು .ದುರ್ಗಪ್ಪ ಮರ ಕಡಿಯುತ್ತಿದ್ದನೆಂದು ಅವನ ಕೊಡಲಿಯನ್ನು ಅರಣ್ಯ ಇಲಾಖೆ ಯವರು ಕಿತ್ತುತಂದಿಟ್ಟುಕೊಂಡಿದ್ದರು . ಕೊಡಲಿಯು ವಾಸ್ತವವಾಗಿ ನಿರೂಪಕರವಾದ್ದ ರಿಂದ ಅವರು ದುರ್ಗಪನಿಂದ ವಿಚಾರ ತಿಳಿದು , ಮೊದಲೇ ನಿರೂಪಕರಿಗೆ ಇಂತ ಕೊಡಲಿಯ ಮೇಲೆ ವ್ಯಾಮೋಹವಿರದಿದ್ದರೂ ನಾಗರಾಜನ ಬಳಿ ಬಂದರು . ಬರರಿಂದ ತರಲೆ ಕೇಸುಗಳ ಜಾಡು ತಿಳಿದು ವಿಷಯ ತಿಳಿದುಕೊಳ್ಳುವ ಕೆಟ್ಟ ಕುತೂಹಲವಿದ್ದುದರಿಂದ ಅಲ್ಲ : ನಾಗರಾಜ್ ನಿಮ್ಮ ಡಿಪಾರ್‌ಮೆಂಟಿನ ಮರ ಕಡಿದರೆ ನೀವು ಅವನ ಮೇಲೆ ಕ್ರಮ ತಗೊಳ್ಳಿ , ಆದರೆ ನನ್ನ ಕೊಡಲಿ ಯಾಕೆ ತಂದು ಆಫೀಸಿನಲ್ಲಿ ಇಡ್ಕೊಂಡಿದ್ದೀರಾ ? ” ಎಂದು ಕೇಳಿದ ಸಂದರ್ಭವಿದಾಗಿದೆ . –

5. “ ವಪನ್ ಸಾರ್ , ವೆಪನ್ ನಮಗೆ ಮುಖ್ಯ ”

ತೇಜಸ್ವಿಯವರು ಬರೆದಿರುವ ‘ ಕೃಷ್ಣಗೌಡನ ಆನೆ ‘ ಎಂಬ ನೀಳತೆಯಲ್ಲಿ ಫಾರೆಸರ್ ನಾಗರಾಜ ನಿರೂಪಕರಿಗೆ ಈ ಮೇಲಿನ ಮಾತನ್ನು ಹೇಳುವನು . ನಿರೂಪಕರು ಫಾರೆಸ್ಟರ್ ನಾಗರಾಜನ ಕಚೇರಿಗೆ ಬಂದು ಮರಕಡಿದವನ ಮೇಲೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು ನನ್ನ ಕೊಡಲಿ ತಂದು ಆಫೀಸಿನಲ್ಲಿಟ್ಟು ಕೊಂಡಿರುವುದೇಕೆಂದು ಕೇಳಿದರು . ಅದಕ್ಕೆ ಉತ್ತರಿಸುತ್ತಾ ನಾಗರಾಜನು “ ವಪನ್ ಸಾರ್ , ವೆಪನ್ ನಮಗೆ ಮುಖ್ಯ ” ಎಂದು ಹೇಳಿ , ಕೋರ್ಟಿನಲ್ಲಿ ಅಪರಾಧಿಯು ಯಾವುದರಿಂದ ಮರ ಕಡಿಯುತ್ತಿದ್ದನೆಂದು ಪ್ರಶ್ನಿಸಿದರೆ ಹಾಜರು ಪಡಿಸಲು ವೆಪನ್ ಮುಖ್ಯವಾದುದರಿಂದ ತಾನು ದುರ್ಗಪ್ಪನ ಕೊಡಲಿಯನ್ನು ಕಿತ್ತಿಟ್ಟುಕೊಂಡಿರುವೆನೆಂದು ತಿಳಿಸಿದನು . ಅಲ್ಲದೆ , ಇಂತಹ ಕಾನೂನುಬಾಹಿರ ಅಪರಾಧಕ್ಕೆ ಕೊಡಲಿಕೊಟ್ಟುದೇಕೆಂದು ನಿರೂಪಕರನ್ನು ಪ್ರಶ್ನಿಸಿದರು .

6 , “ ನಿನ್ನ ಮುಕಾರೇನಿದ್ರೂ ಬರಣಿಗೇಲಿ ಇರಬೇಕು . ”

ತೇಜಸ್ವಿಯವರು ಬರೆದಿರುವ ‘ ಕೃಷ್ಣಗೌಡನ ಆನೆ ‘ ಎಂಬ ನೀಳ್ಗತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದ್ದು , ಫಾರೆಸ್ಟರ್ ನಾಗರಾಜನು ದುರ್ಗಪ್ಪನಿಗೆ ಇದನ್ನು ಹೇಳುವನು . ನಾಗರಾಜ ಮರಕಡಿಯುತ್ತಿದ್ದ ಅಪರಾಧಕ್ಕೆ ದುರ್ಗಪ್ಪನನ್ನು ಲಾಕಪ್ಪಿಗೆ ಹಾಕಿಸುವ ನೆಂದು ಹೆದರಿಸಿದಾಗ ದುರ್ಗಪ್ಪ ತಾನು ಮರಕಡಿದಿಲ್ಲವೆಂದೂ , ಕೃಷ್ಣಗೌಡನ ಆನೆ ಮುರಿದು ಬೀಳಿಸಿದ್ದೆಂದೂ ಹಳೇ ಪ್ರವರವನ್ನು ಪುನರಾವರ್ತನೆ ಮಾಡಿದನು . ಅವನು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಿರುವುದನ್ನು ಕೇಳಿ ನಾಗರಾಜನಿಗೆ ರೇಗಿ ಹೋಯಿತು . ಆಗ ಅವನು ದುರ್ಗಪ್ಪ ತನ್ನ ಹೇಳಿಕೆಯನ್ನು ಬರೆದು ಕೊಡಬೇಕೆಂದೂ , ಬರವಣಿಗೆ – ಯಲ್ಲಿದ್ದರೆ ಮಾತ್ರ ತಾನು ಆನೆಯ ಮೇಲೆ ಕ್ರಮಕೈಗೊಳ್ಳಬಹುದೆಂದೂ ತಿಳಿಸಿದ ಸಂದರ್ಭವಿದಾಗಿದೆ .

7. “ ಡ್ರೈವರಣ್ಣ ಎತ್ತಾಗಿ ಹೋದ ! ಇಲ್ಲೇ ಇದ್ದನಲ್ಲ ! ”

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ ಕೃಷ್ಣಗೌಡನ ಆನೆ ‘ ಎಂಬ ನೀಳ್ಗತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ .ಶಿವೇಗೌಡರ ಸಾಮಿಲ್ಲಿನಲ್ಲಿ ವೇಲಾಯುಧ ಮತ್ತು ಆನೆ ಇಬ್ಬರೂ ಪಾನಮತ್ತ ‘ ರಾಗಿದ್ದ ನಿಮಿತ್ತ ಲಾರಿ ಮತ್ತು ನಾಟಾಗಳಿಗೆ ಕಟ್ಟಿದ್ದ ಹಗ್ಗವನ್ನು ಬಚ್ಚದ ಇದ್ದ ಲಾರಿಯನ್ನು ಆನೆ ವೇಲಾಯುಧನ ಆದೇಶದಂತೆ ತಳ್ಳಿ ಬೀಳಿಸಿತು . ಲಾರಿ ಧಡಾರನೆ ಬಿದ್ದ ಸದ್ದು ಕೇಳಿ ಶಿವೇಗೌಡರು ಮತ್ತು ಲಾರಿ ಕ್ಲೀನರ್ ಎಲ್ಲರೂ ಓಡಿ ಬಂದು ಉರುಳಿ ಬಿದ್ದಿರುವ ಲಾರಿ ನೋಡಿ ಕಂಗಾಲಾಗಿ ಹೋಗುವರು . ಆದರೆ ಕ್ಲೀನರ್ ಈ ಬಿಚ್ಚುವ ಬದಲು ಯಾರನ್ನೋ ಹುಡುಕುತ್ತಿರುವುದು ಕಂಡು ಏನೆಂದು ಕೇಳಿದಾಗ ಆತ ಡ್ರೈವರಣ್ಣ ಎಲ್ಲಾಗಿ ಹೋದ ! ಇಲ್ಲೇ ಇದ್ದನಲ್ಲ ” ಎಂದು ಗೊಣಗಿದ , ಆನಂತರವ ಲಾರಿಯೊಳಗೆ ಸತ್ತುಬಿದ್ದಿದ ಡ್ರೈವರನ ಪತ್ತೆಯಾಗುವುದು .

8. “ ಕುಶಾಲಿಗಂತ ಸೊಂಡಿಲು ಬೀಸಿದರೆ ಸಾಕಲ್ಲ . ”

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ ಕೃಷ್ಣಗೌಡನ ಆನೆ ‘ ಎಂಬ ಆಯ್ದಿರುವ ಈ ಮೇಲಿನ ವಾಕ್ಯವನ್ನು ದುರ್ಗಪ್ಪ ನಿರೂಪಕರ ಬಳಿ ಹೇಳುವನು . ಕೊಡಲಿ ಹಿಂದಿರುಗಿಸಲು ನಿರೂಪಕರ ಮನೆಗೆ ಬಂದಿದ್ದ ದುರ್ಗಪ್ಪ ಶಿವೇಗೌಡ ಮತ್ತು ಕೃಷ್ಣಗೌಡ ಇಬ್ಬರೂ ಸೇರಿ ಡ್ರೈವರ್‌ನ ಸಾವಿನ ಸುದ್ದಿಯನ್ನು ಮುಚ್ಚಿಹಾಕಿದ ಸಂಗತಿ ಯನ್ನು ತಿಳಿಸಿದನಲ್ಲದೆ , ಷರಾಬು ಕುಡಿದು ಡ್ರೈವರ್‌ನ ಸಾವಿಗೆ ಕಾರಣವಾದ ಕೃಷ್ಣಗೌಡನ ಆನೆಯನ್ನು ಮನಸಾರೆ ಶಪಿಸಿದನು . ಆ ಸಂದರ್ಭದಲ್ಲಿ “ ಆ ಆನೆಗೆ ಹೆಂಡ ಕುಡಿಸಿದರೆ ಹೇಗಾಗಬಹುದು ಹೇಳಿ , ಮಕ್ಕಳು ಮರಿ ಓಡಾಡೋ ಜಾಗದಲ್ಲಿ ಓಡಾಡುತ್ತದೆ ಕುಶಾಲಿಗಂತ ಸೊಂಡಿಲು ಬೀಸಿದರೆ ಸಾಕಲ್ಲ . ನಮ್ಮಂತೋರು ನಮಃಶಿವಾಯ ಅನ್ನೋದಕ್ಕೆ ” ಎಂದು ತನ್ನ ಆತಂಕವನ್ನು ದುರ್ಗಪ್ಪ ನಿರೂಪಕರಿಗೆ ತಿಳಿಸಿದನು .

9. “ ಹದಿನಾಲ್ಕು ಇಂಜಕ್ಷನ್ ಹೊಟ್ಟೆಗೆ ಚುಚ್ಚುಸ್ಕೊತೀನಿ . ”

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ ಕೃಷ್ಣಗೌಡನ ಆನ ಎಂಬ ನೀಳ್ಗತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಜಬ್ಬಾರ್ ತನಗೆ ನಾಯಿಕಟ್ಟಿರುವ ವಿಷಯವನ್ನು ನಿರೂಪಕರಿಗೆ ತಿಳಿಸುತ್ತಾ ಈ ಮೇಲಿನ ಮಾತನ್ನು ಹೇಳಿದ್ದಾನೆ . ಪೋಸ್ಟ್ ಕೊಡಲು ಹೋದಲ್ಲಿ ಎಲ್ಲರ ಮನೆ ಮುಂದೆಯೂ ನಾಲ್ಕು ನಾಲ್ಕು ನಾಯಿ ಮಲಗಿರುತ್ತದೆಂದೂ , ಪ್ರತಿ ವರ್ಷವೂ ಒಂದಲ್ಲ ಒಂದು ನಾಯಿ ತನಗೆ ಕಚ್ಚುವುದೆಂದೂ ಆತ ನಿರೂಪಕರಿಗೆ ತಿಳಿಸಿದನು . ಹುಚ್ಚು ಬಂದ ಮೇಲೆ ಅದಕ್ಕೆ ಔಷಧವೇ ಇಲ್ಲದ ಕಾರಣ ತಾನು ಹುಚ್ಚು ನಾಯಿಯಾಗಿರಲಿ , ಇಲ್ಲದಿರಲಿ ಅದು ಕಚ್ಚಿದ ಮೇಲೆ ಹದಿನಾಲ್ಕು ಇಂಜೆಕ್ಷನ್ ಹೊಟ್ಟೆ ಚುಚ್ಚಿಸಿಕೊಳ್ಳುವುದಾಗಿ ನಿರೂಪಕರ ಬಳಿ ಜಬ್ಬಾರ್ ಹೇಳಿಕೊಳ್ಳುವನು .

10. “ ಕೃಷ್ಣಗೌಡರ ಆನೆಗೂ ಕಚ್ಚಿದೆ ಅಂತ ವರ್ತಮಾನ ಉಂಟಪ್ಪ ”

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ ಕೃಷ್ಣಗೌಡನ ಆನೆ ‘ ಎಂಬ ನೀಳ್ಗತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ವೆಟರಿ ಸ್ಟಾಕ್ ಮನ್ ಪುಟ್ಟಯ್ಯ ನಿರೂಪಕರ ಬಳಿ ಮಾತನಾಡುತ್ತ ಒಂದು ಹುಚ್ಚು ನಾಯಿ ಏಳು ಜನಕ್ಕೆ ಮತ್ತು ಹತ್ತಾರು ದನಗಳಿಗೆ ಕಚ್ಚಿರುವುದನ್ನು ತಿಳಿಸಿ . ಆನಂತರ ಕೃಷ್ಣಗೌಡರ ಆನೆಗೂ ಹುಚ್ಚುನಾಯಿ ಕಚ್ಚಿದೆಯೆಂಬ ವರ್ತಮಾನವಿರುವು ದಾಗಿಯೂ ಒಂದು ವೇಳೆ ಅದನ್ನು ಇಂಜೆಕ್ಷನ್‌ಗೆ ಕರೆತಂದರೆ ಏನು ಮಾಡುವುದೆಂಬ ಅವರಿಗೆಲ್ಲ ಇಂಜೆಕ್ಷನ್ ಸಪ್ಲೆಮಾಡಲಾಗದ ತನ್ನ ಅಸಹಾಯಕತೆಯನ್ನು ವಿವರಿಸುತ್ತಾನೆ . ತನ್ನ ಕಳವಳ – ಚಿಂತೆಯನ್ನು ವ್ಯಕ್ತಪಡಿಸುವನು .

11. “ ನಂಗೇನು ಈ ನಾಯಿಗಳನ್ನು ಕಂಡರೆ ಪ್ರೀತಿನಾ ಸ್ವಾಮಿ

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ ಕೃಷ್ಣಗೌಡನ ಆನೆ ‘ಎಂಬ ನೀಳ್ಗತೆಯಲ್ಲಿ ಮುನ್ಸಿಪಾಲಿಟಿ ಅಧ್ಯಕ್ಷರಾದ ಖಾನ್ ಸಾಹೇಬರು ನಿರೂಪಕರನ್ನು ಊದ್ದೇಶಿಸಿ ಈ ಮೇಲಿನ ಮಾತನ್ನು ಹೇಳುತ್ತಾರೆ . ನಿರೂಪಕರು ಮೂಡಿಗೆರೆಯಲ್ಲಿ ಬೀದಿನಾಯಿಗಳ ಕಾಟ ಹೆಚ್ಚಿರುವುದರಿಂದ ಆ ಬಗ್ಗೆ ವಿಚಾರಿಸಲು ಪುರಸಭೆಗೆ ಹೋಗುತ್ತಾರೆ . ಅಲ್ಲಿದ್ದ ಮುನ್ಸಿಪಾಲಿಟಿ ಅಧ್ಯಕ್ಷರಾದ ಖಾನ್ ಸಾಹೇಬರು ತಮ್ಮ ‘ ನಾಯಿ ನಿರ್ಮೂಲನ ‘ ಕಾರಕ್ರಮಗಳನ್ನು ವಿವರಿಸುವ ಮೊದಲು “ ನಂಗೇನು ಈ ನಾಯಿಗಳನ್ನು ಕಂಡರೆ ಪ್ರೀತಿನಾ ಸ್ವಾಮಿ ! ” ಎಂದು ಪೀಠಿಕೆ ಹಾಕಿ ಆನಂತರ ತಾವು ಕೈಗೊಂಡ ಹಲವು ಯೋಜನೆಗಳನ್ನು ನಿರೂಪಕರಿಗೆ ವಿವರಿಸಿರುವ ಸಂದರ್ಭವಿದಾಗಿದೆ .

12. “ ಹೊರಗಡೆಯಿಂದ ಎಕ್ಸ್‌ಪೋರ್ಟ್ ಆದವು . ”

ತೇಜಸ್ವಿಯವರು ಬರೆದಿರುವ ‘ ಕೃಷ್ಣಗೌಡನ ಆನೆ ‘ ಎಂಬ ನೀಳ್ಗತೆಯಲ್ಲಿ ಮುನ್ಸಿಪಾಲಿಟಿಯ ಪ್ರೆಸಿಡೆಂಟ್ ಈ ಮೇಲಿನ ಮಾತನ್ನು ನಿರೂಪಕರಿಗೆ ಹೇಳುವರು . ನಿರೂಪಕರು ಮುನ್ಸಿಪಾಲ್ಟಿ ಪ್ರೆಸಿಡೆಂಟರಾದ ಖಾನ್ ಸಾಹೇಬರನ್ನು ಭೇಟಿ ಮಾಡಿ ಊರಿನಲ್ಲಿ ಹೆಚ್ಚಿರುವ ಕಂತಿನಾಯಿಗಳ ವಿಚಾರವನ್ನು ಪ್ರಸ್ತಾಪಿಸಿದರು . ಆಗ ಖಾನ್ ಸಾಹೇಬರು ಮೂಡಿಗೆರೆಯೊಳಗೆ ತುಂಬಾ ಕಂತ್ರಿ ನಾಯಿಗಳಿರೋದು ನಿಜ . ಆದರೆ ಅವೆಲ್ಲಾ ಇಲ್ಲಿಯ ನಾಯಿಗಳಲ್ಲ . ಯಾರೋ ಹೊರಗಡೆಯಿಂದ ಲಾರಿಯಲ್ಲಿ ನಾಯಿಗಳನ್ನು ತುಂಬಿಕೊಂಡು ಬಂದು ಇಲ್ಲಿ ರಾತ್ರೋರಾತ್ರಿ ಬಿಟ್ಟು ಹೋಗಿದ್ದಾರೆ ಎಂದು ದೂರಿದ ಸಂದರ್ಭವಿದಾಗಿದೆ .

13. “ ಮುನ್ಸಿಪಾಲ್ ಪ್ರೆಸಿಡೆಂಟಾಗಿ ಊರನ್ನು ಸ್ವಚ್ಚವಾಗಿಡೋದು ನಿಮ್ಮ ಕರ್ತವ್ಯ ”

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ ಕೃಷ್ಣಗೌಡನ ಆನೆ ‘ ಎಂಬ ನೀಳ್ಗತೆ ಯಲ್ಲಿ ಮುನ್ಸಿಪಾಲಿಟಿಯ ಪ್ರೆಸಿಡೆಂಟ್ ಖಾನ್ ಸಾಹೇಬರಿಗೆ ನಿರೂಪಕರು ಈ ಮೇಲಿನ ಮಾತನ್ನು ನಿರೂಪಕರಿಗೆ ತಿಳಿಸುವರು . ಕಂತ್ರಿನಾಯಿಗಳು ಹೆಚ್ಚಾಗಿರುವ ಪ್ರಸ್ತಾಪವನ್ನು ಖಾನ್ ಸಾಹೇಬರು ಹಿಂದೂ ಮುಸ್ಲಿಂ ಧರ್ಮದೊಂದಿಗೆ ಗಂಟುಹಾಕುತ್ತಿದ್ದಾರೆಂದು ನಿರೂಪಕರಿಗೆ ಅನ್ನಿಸಿತು . ತನ್ನ ಜವಾಬ್ದಾರಿ ಸರಿಯಾಗಿ ನಿರ್ವಹಿಸದೆ ಧರ್ಮಗಳ ಕಾರಣ ಕೊಡುತ್ತಿರುವ ಆತನಿಗೆ ನಿನ ಆತನ ಕರ್ತವ್ಯ ಪತ್ತೆಯನ್ನು ನೆನಪಿಸುತ್ತಾ ನಿರೂಪಕರು “ ಖಾನ್ ಸಾಹೇಬ್ರೆ ನೀವು ಸಣ್ಣಪುಟ್ಟ ವಿಷಯ ಎಲ್ಲ ತಂದು ಧರ್ಮಕ್ಕೆ ಗಂಟುಹಾಕಿ ಸುಮ್ಮ ಸುಮ್ಮನೆ ಕಾಂಪ್ಲಿಕೇ ಮಾಡ್ತಿದ್ದೀರಿ . ಮುನ್ಸಿಪಲ್ ಪ್ರೆಸಿಡೆಂಟಾಗಿ ಈ ಊರನ್ನು ಸ್ವಚ್ಛವಾಗಿಡೋದು ಕರ್ತವ್ಯ ” ಎಂದು ತಿಳುವಳಿಕೆ ಹೇಳಿದ ಸಂದರ್ಭವಿದು .

14 , “ ಕಂಬದ ಮೇಲೆ ಯಾಕೋ ಕೈಲಾಸ ಕಂಡಹಾಗೆ ಇದೆಯಲ್ಲಾ ”

ತೇಜಸ್ವಿಯವರು ಬರೆದಿರುವ ‘ ಕೃಷ್ಣಗೌಡನ ಆನೆ ‘ ಎಂಬ ನೀಳ್ಗತೆ ಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಅಲ್ಲಿ ನುಗ್ಗೆಹಳ್ಳಿಯ ಟೆಲಿಫೋನ್ ಲೈನು ಸರಿಮಾಡಲು ಹೋದ ತಿಪ್ಪಣ್ಣನ ಸುದ್ದಿಯಲ್ಲ ದಾಗ , ರಮೇಶಬಾಬು ತಿಪ್ಪಣ್ಣನ ಸೋಮಾರಿತನವನ್ನು ಶಪಿಸುತ್ತಾ ಲೈನ್‌ಮನ್ ಶಂಕರಪ್ಪನನ್ನು ಕರೆದುಕೊಂಡು ನುಗ್ಗೆಹಳ್ಳಿ ಲೈನು ನೋಡುತ್ತಾ ಹೊರಟನು . ಜಂಕ್ಷನ್ ಬಾಕ್ಸ್ ಇದ್ದ ಹದಿನೇಳನೇ ಕಂಬದ ಮೇಲೆ ಕುಳಿತಿದ್ದ ತಿಪ್ಪಣ್ಣನನ್ನು ಕಂಡ ಶಂಕರಪ್ಪ “ ಏನ್ ಸಾರ್ ಇದೂ ! ಏನಾಯ್ತು ಇವನಿಗೆ ? ಕಂಬದ ಮೇಲೇ ಯಾಕೂ ಕೈಲಾಸ ಕಂಡಹಾಗೆ ಇದೆಯಲ್ಲಾ ” ಎಂದು ಕಾತರ ಮತ್ತು ಕಳವಳದ ದನಿಯಲ್ಲಿ ಹೇಳಿದನು . ತಿಪ್ಪಣ್ಣ ನಿಜವಾಗಿಯೂ ಕಂಬದ ಮೇಲೆ ಕೈಲಾಸ ಕಂಡಿರುತ್ತಾನೆ .

15. “ ಈ ಕಂಬದೊಳೆ ಏನೋ ಸೇರ್‌ಕೊಂಡಿದೆ . ”

ತೇಜಸ್ವಿಯವರು ಬರೆದಿರುವ ‘ ಕೃಷ್ಣಗೌಡನ ಆನೆ ‘ ಎಂಬ ಲೈನ್‌ಮನ್ ಶಂಕರಪ್ಪ ರಮೇಶಬಾಬುಗೆ ಈ ಮೇಲಿನ ವಾಕ್ಯವನ್ನು ಹೇಳುತ್ತಾನೆ . ಕಂಬದ ಮೇಲೆ ಕುಳಿತಿರುವ ತಿಪ್ಪಣ್ಣನಿಗೆ ಜೀವವಿದ್ದಲ್ಲಿ ಆಸ್ಪತ್ರೆಗೆ ಸೇರಿಸುವ ಉದ್ದೇಶದಿಂದ ರಮೇಶಬಾಬು ಶಂಕರಪ್ಪನಿಗೆ ಕಂಬಹತ್ತಿ ನೋಡಲು ಸೂಚಿಸುತ್ತಾನೆ . ಶಂಕರಪ್ಪ ಅರ್ಧಕಂಬ ಹತ್ತುವಷ್ಟರಲ್ಲಿ ಅವನ ಕೈಕಾಲೆಲ್ಲ ಜುಮ್ಮೆಂದು , ಜೀವ ನಡುಗಿ ದಂತಾಗಿ ಜಾರಿ ಕೆಳಗೆ ಬಿದ್ದನು . ಅವನ ಬಳಿ ಓಡಿ ಬಂದ ರಮೇಶಬಾಬು ಏನಾಯ್ಲೆಂದು ವಿಚಾರಿಸಿದಾಗ ಶಂಕರಪ್ಪ “ ಇದ್ದಂಗೆ ಶಿಡ್ಲು ಹೊಡೆದಂಗಾಯ್ತು ಸಾರ್ , ಈ ಕಂಬ ದೊಳೆ ಏನೋ ಸೇರ್‌ಕೊಂಡಿದೆ ” ಎಂದು ಭೂತದರ್ಶನವಾದವನಂತೆ ತೊದಲಿದನು . ಎಲೆಕ್ಟಿಕ್ ಲೈನು ಟೆಲಿಫೋನ್ ಲೈನಿಗೆ ಟಚ್ಚಾಗುತ್ತಿರುವುದೆಂಬ ಅರಿವು ಶಂಕರಪ್ಪನಿಗಾಗದೆ , ಆತ ಕಂಬದಲ್ಲಿ ಭೂತ ಪಿಶಾಚಿ ಸೇರಿಕೊಂಡಿದೆ ಎಂದು ಯೋಚಿಸುತ್ತಾನೆ . ಅನುಭವಿ ಯಾದ ರಮೇಶಬಾಬುವಿಗೆ ನಡೆದಿರಬಹುದಾದ ಸಂಗತಿ ಅರ್ಥವಾಗುತ್ತದೆ .

16. “ ಆನೆ ಬೇಲಿ ದಾಟಿ ಹೋಯ್ತು ಸಾರ್ ”

ತೇಜಸ್ವಿಯವರು ರಚಿಸಿರುವ ‘ ಕೃಷ್ಣಗೌಡನ ಆನೆ ‘ ಎಂ ನೀಳ್ಗತೆಯಲ್ಲಿ ರಾಮಪ್ಪನು ನಾಗರಾಜನಿಗೆ ಈ ಮೇಲಿನಂತೆ ಹೇಳುವನು . ಆನೆಗಾಗಿ ಕಾಯುತ್ತಾ ನಾಗರಾಜ ಕೃಷ್ಣಗೌಡರ ತೋಟದ ಬೇಲಿ ಮೂಲೆಯಲ್ಲಿ ಬಿಳಿ ಬೂರುಗದ ಮರದ ಕೆಳಗೆ ಶಿಕಾರಿಗಂಡಿಯಲ್ಲಿ ಕೋವಿ ಹಿಡಿದುಕೊಂಡು ಕುಳಿತಿದ್ದನು . ಆನೆ ಭಾರೀ ಪ್ರಾಣಿಯಾದರೂ ಸುಳಿವೇ ಕೊಡದೆ ತಂಗಾಳಿಯಂತೆ ಓಡಾಡಬಲ್ಲದೆಂಬುದನ್ನು ಆತ ಅನುಭವದಿಂದ ಬಲ್ಲವನಾಗಿದ್ದ . ಅಷ್ಟರಲ್ಲಿ ಅಲ್ಲಿಗೆ ಬಂದ ರಾಮಪ್ಪನು ಆನೆಯು ಬೇಲಿ ದಾಟಿ ಹೋಯೆಂಬ ಸಂಗತಿಯನ್ನು ತಿಳಿಸಿದನು . ಇದರಿಂದ ನಾಗರಾಜನಿಗೆ ಇನ್ನಷ್ಟು ರೇಗಿ ಹೋಯಿತು .

17.“ ಕೋವಿ ಸಿಕ್ಕಿದೆ , ಆದರೆ ಹೆಣ ಸಿಗಲಿಲ್ಲ .

ತೇಜಸ್ವಿಯವರು ಬರೆದಿರುವ ‘ ಕೃಷ್ಣಗೌಡನ ಆನೆ ‘ ಎಂಬ ನೀಳತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ನಾಗರಾಜ ಅಂತರ್ಧಾನನಾದುದು ಬಗೆಹರಿಯಲಾಗದ ಸಮಸ್ಯೆಯಾಯಿತು . ಆತನನ್ನು ಕೊಲೆ ಮಾಡಲಾಯಿತೋ , ಆನೆ ತುಳಿದು ಸಾಯಿಸಿತೋ , ಆತ್ಮಹತ್ಯೆ ಮಾಡಿಕೊಂಡನೋ ಎಂಬ ಯಾವ ಸಂಗತಿಗಳೂ ತೀರ್ಮಾನಗೊಳ್ಳಲಿಲ್ಲ . ಪೊಲೀಸರು ಕಾಡಲ್ಲಾ ಹುಡುಕಾಡಿ ಕೊನೆಗೆ ನಾಗರಾಜನ “ ಕೋವಿ ಸಿಕ್ಕಿದೆ . ಆದರೆ ಹಣ ಸಿಗಲಿಲ್ಲ . ಎಂದು ಮಹಜರು ಬರೆದುಕೊಂಡು ಸುಮ್ಮನಾದರೆಂದು ನಿರೂಪಕರು ತಿಳಿಸಿದ್ದಾರೆ .

18. ಬುಟ್ಟಿಗಟ್ಟೆ ಬಿದ್ದಿಲ್ಲವ ಅದರ ಲದ್ದಿ !

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ ಕೃಷ್ಣಗೌಡನ ಆನೆ ‘ ಎಂಬ ನೀಳತೆಯಲ್ಲಿ ಲೈನ್‌ಮನ್ ದುರ್ಗಪ್ಪ ನಿರೂಪಕರಿಗೆ ಈ ಮೇಲಿನ ಮಾತನ್ನು ಹೇಳುತ್ತಾನೆ . ನಿರೂಪಕರ ಮನೆಗೆ ಕೊಡಲಿ ಕೇಳಲು ಬಂದ ದುರ್ಗಪ್ಪನನ್ನು ನಿರೂಪಕರು ಕರೆಂಟು ಕೆಲಸಕ್ಕೆ ಕೊಡಲಿ ಏಕೆಂದು ಪ್ರಶ್ನಿಸಿದಾಗ , ಅವನು ಕೃಷ್ಣಗೌಡರ ಆನೆಯಿಂದಾಗಿ ಮರವೊಂದು ಮುರಿದುಕೊಂಡು ತಂತಿಮೇಲೆ ಬಿದ್ದಿರುವುದರಿಂದ ಮರವನ್ನು ಕಡಿದು ಲೈನ್‌ಕ್ಲಿಯರ್ ಮಾಡಲು ಎಂದು ಉತ್ತರಿಸುತ್ತಾನೆ . ಆಗ ಲೇಖಕರು “ ಅದು ಹೇಗೆ ಆನೆ ಕೆಲಸ ಅಂತೀಯ ? ತಂತಿ ಮೇಲೆ ಕೊಂಬೆ ಎಳೆದರೆ ಅದಕ್ಕೆ ಕರೆಂಟು ಹೊಡೆದು ಸತ್ತೋಗಲ್ವಾ ? ” ಎಂದು ಪ್ರಶ್ನಿಸಿದರು . ಆಗ ದುರ್ಗಪ್ಪ ತನ್ನ ಮಾತನ್ನು ಸಮರ್ಥಿಸಿ ಕೊಳ್ಳುತ್ತಾ ಪುರಾವೆಯಾಗಿ ಮರದ ಪಕ್ಕ ಆನೆಯ ಲದ್ದಿ ಬಿದ್ದಿರುವುದನ್ನು ತಿಳಿಸುತ್ತಾನೆ .

19. ಅದನ್ನು ಸುತ್ತಿಗೆ ಎಂದು ಕರೆಯಬಹುದಿತ್ತು .

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ ಕೃಷ್ಣಗೌಡನ ಆನೆ ‘ ಎಂಬ ನೀಳತೆಯಲ್ಲಿ ನಿರೂಪಕರೇ ತಮ್ಮ ಕೊಡಲಿಯ ಆಕಾರದ ಬಗ್ಗೆ ಹೇಳುತ್ತಾ ಈ ಮೇಲಿನ ಮಾತನ್ನು ಹೇಳಿರುವರು . ದುರ್ಗಪ್ಪ ಕೊಡಲಿ ತೆಗೆದುಕೊಂಡು ಹೋದವನು ಮೂರಾಲ್ಕು ದಿನವಾದರೂ ಹಿಂದಿರುಗಿಸಲು ಬಾರದಿದ್ದಾಗ ನಿರೂಪಕರು ಆ ಕೊಡಲಿಯ ಬಗ್ಗೆ ತಮ್ಮ ನಿರ್ಲಕ್ಷವನ್ನು ವಿವರಿಸುತ್ತಾ ಅದರ ಆಕಾರದ ಬಗ್ಗೆ ಯೋಚಿಸುವರು . ನಿರೂಪಕರ ಮನೆ ಬಳಿಯ ಕೆರೆ ಕೆಲಸಕ್ಕೆಂದು ಬಂದಿದ್ದ ಮಣ್ಣು ಒಡ್ಡರು ಅಗೆಯುವಾಗ ಅಡ್ಡಾಗುವ ಬೇರುಗಳನ್ನು ಕಡಿಯಲೆಂದು ನಿರೂಪಕರ ಕೊಡಲಿ ತೆಗೆದುಕೊಂಡು ಕಲ್ಲು ಮಣ್ಣು ನೋಡದೆ ನೀಳತೆಯಲ್ಲಿ ಯರಾಬಿರಿಯಾಗಿ ಒಪ್ಪಿದ್ದರಿಂದ ಕೊಡಲಿಯ ಹಿಂಭಾಗ ಯಾವುದು , ಮುಂಭಾಗ ಯಾವುದು ಗೊತ್ತಾಗದಷ್ಟು ಹಾಳಾಗಿತ್ತು . ಇದನ್ನು ವಿವರಿಸುತ್ತಾ ಲೇಖಕರು ಈಗ ಅದನ್ನು ಸುತ್ತಿಗೆ ಎಂದೂ ಸಹ ಕರೆಯಬಹುದಿತ್ತು ಎಂದು ಹಾಸ್ಯ ಮಾಡಿದ್ದಾರೆ .

20. ಜಗದ್ಗುರುಗಳು ಯಾವ ಧೈರ್ಯದ ಮೇಲೆ ಇದರ ಮೇಲೆ ಕುಳಿತುಕೊಳ್ಳುತ್ತಿದ್ದರೋ ?

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ ಕೃಷ್ಣಗೌಡನ ಆನೆ ‘ ಎಂಬ ಕಾಡಪ್ಪಶೆಟ್ಟರು ನಿರೂಪಕರ ಬಳಿ ಈ ಮೇಲಿನ ಮಾತನ್ನಾಡುವರು . ` ನಿರೂಪಕರು ತಮ್ಮ ಗೆಳೆಯ ಪ್ರಕಾಶ್ ಜೊತೆ ಭದ್ರಾ ಅರಣ್ಯದಲ್ಲಿ ತಿರುಗುತ್ತಿರ ಬೇಕಾದರೆ ಕಾಡಪ್ಪಶೆಟ್ಟರು ಸಿಕ್ಕಿ ಕೃಷ್ಣಗೌಡನ ಆನೆಯು ಅಯ್ಯಪ್ಪಸ್ವಾಮಿ ಫೋಟೊ ಸಮೇತ ಕಾಡಿಗೆ ಓಡಿಹೋಗಿರುವ ವರ್ತಮಾನ ತಿಳಿಸಿದರು . ಆನೆ ಮೈಮೇಲಿದ್ದ ಏಳೆಂಟು ರೂಪಾಯಿಗಳ ಆಭರಣವನ್ನು ಕಾಡಪ್ಪಶೆಟ್ಟರು ಎಲ್ಲಿಂದಲೋ ಸಾವಿರ ಎರವಲು ತಂದಿದ್ದರಿಂದ ಅದಕ್ಕಾಗಿ ಕಾಡಿನಲ್ಲಿ ಆನೆಯನ್ನು ಹುಡುಕುತ್ತಿದ್ದರು . ಆಗ ಆನೆಯ ಪುಂಡಾಟಿಕೆಯನ್ನು ಬೈಯುತ್ತಾ “ ಗೂಳೂರು ಮಠದ ಜಗದ್ಗುರುಗಳು ಯಾವ ಧೈರ್ಯದ ಮೇಲೆ ಇದರ ಮೇಲೆ ಕುಳಿತುಕೊಳ್ಳುತ್ತಿದ್ದರೋ ! ” ಎಂದು ಬಾಯಿತುಂಬಾ ಬೈಯುವರು .

21. “ ಪೋಸ್ಟ್ ಬಾಕ್ಸ್‌ಗಳನ್ನು ನೇತುಹಾಕುವುದು ಕಡಿಮೆ ಖರ್ಚಲ್ಲವೆ ? ”

ತೇಜಸ್ವಿಯವರು ಬರೆದಿರುವ ‘ ಕೃಷ್ಣಗೌಡನ ಆನೆ ‘ ಎಂಬ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಪೋಸ್ಟ್‌ಮನ್ ಜಬ್ಬಾರನ ತೊಂದರೆಗಳನ್ನು ವಿವರಿಸುತ್ತಾ ನಿರೂಪಕರು ಈ ಮಾತನ್ನಾಡಿರುವರು . ಮೂಡಿಗೆರೆಯಂಥ ಕುಗ್ರಾಮ ಆಧುನಿಕರಣಗೊಳ್ಳುತ್ತಾ ಟೆಲಿಫೋನ್ ಎಕ್ಸ್‌ಛೇಂಜ್ , ವಿದ್ಯುತ್‌ ಎಲ್ಲ ಬಂದಹಾಗೆ ಅಂಚೆ ಇಲಾಖೆಯವರು ತಮ್ಮ ಸೇವೆಯನ್ನು ವಿಸ್ತರಿಸುತ್ತಾ ಹೋದುದ್ದನ್ನು ವಿವರಿಸಿ ಲೇಖಕರು , ಆ ಸೇವೆ ವಿಸ್ತಾರಗೊಂಡ ಬಗೆಯನ್ನು ಲೇವಡಿ ಮಾಡಿದ್ದಾರೆ . ಹ್ಯಾಂಡ್‌ಪೋಸ್ಟ್ , ಬಿದಿರಳ್ಳಿ ಮುಂತಾದೆಡೆ ಪೋಸ್ಟ್‌ಬಾಕ್ಸ್‌ಗಳನ್ನು ನೇತಾಕಿದ್ದೇ ಆ ಇಲಾಖೆಯ ಸೇವಾ ವಿಸ್ತರಣೆಯಾಗಿತ್ತು ಇದನ್ನು ಹೇಳುತ್ತಾ ಲೇಖಕರು ಪೋಸ್ಟಾಫೀಸ್ ಶಾಖೆ ತೆರೆಯುವ ಬದಲು ಪೋಸ್ಟ್ ಬಾಕ್ಸ್‌ಗಳನ್ನು ನೇತುಹಾಕುವುದು ಕಡಿಮೆ ಖರ್ಚಲ್ಲವೇ ! ಎಂದು ವ್ಯಂಗ್ಯವಾಡಿದ್ದಾರೆ . ಜಬ್ಬಾರ್ ಪೋಸ್ಟ್ ಕೊಡುವುದ ರೊಂದಿಗೆ ಪ್ರತಿದಿನ ಅಲ್ಲೆಲ್ಲಾ ಹೋಗಿ ಕ್ಲಿಯರ್ ಮಾಡಬೇಕಾದ ತೊಂದರೆಗೆ ಸಿಲುಕಿದ್ದನು .

22. “ ಕಂತ್ರಿ ನಾಯಿಗಳನ್ನು ಕಡಿಮೆ ಮಾಡೋದಕ್ಕೆ ಆಗೋಲ್ವೆ ? ”

ತೇಜಸ್ವಿಯವರು ಬರೆದಿರುವ ‘ ಕೃಷ್ಣಗೌಡನ ಆನೆ ‘ ಎಂಬ ನೀಳತೆಯಲ್ಲಿ ವೆಟರರಿ ಆಸ್ಪತ್ರೆಯ ಸ್ಟಾಕ್‌ಮನ್ ಪುಟ್ಟಯ್ಯ ಈ ಮೇಲಿನ ವಾಕ್ಯವನ್ನು ನಿರೂಪಕರ ಬಳಿ ಹೇಳುವನು . ನೀಳತೆಯಿಂದ ಊರಿನಲ್ಲಿ ಕಂತಿನಾಯಿಗಳು ಹೆಚ್ಚಾಗಿರುವುದಕ್ಕೆ ಮುನ್ಸಿಪಾಲಿಟಿಯವರ ಬೇಜಬ್ದಾರಿತನವನ್ನು ನಿಂದಿಸುತ್ತಾ ಪುಟ್ಟಯ್ಯ ನಿರೂಪಕರ ಬಳಿ “ ನೋಡಿ ಸಾರ್ ಈ ಊರಿನ ಮುನ್ಸಿಪಾಲಿಟಿಯವರು ಸ್ವಲ್ಪವೂ ಜವಾಬ್ದಾರಿಯಿಲ್ಲದ ಜನ , ಇವರಿಂದ ಮತ್ತೇನು ಆಗದಿದ್ರೂ ಪರ್ವಾಗಿಲ್ಲ , ಈ ಊರಿನ ಕಂತ್ರಿ ನಾಯಿಗಳನ್ನು ಕಡಿಮೆ ಮಾಡೋದಕ್ಕೆ ಆಗೋಲ್ವೆ ? ” ಎಂದು ದೂರಿದ ಸಂದರ್ಭವಿದು .

23. “ ಹೌದಾ ಎಲ್ಲಿ ಕಚ್ಚಿತೋ ಜಬ್ಬಾರ್ ? ”

ತೇಜಸ್ವಿಯವರು ಬರೆದಿರುವ ‘ ಕೃಷ್ಣಗೌಡನ ಆನೆ ‘ ಎಂಬ ನೀಳತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಊರಿನಲ್ಲಿ ಕಂತಿನಾಯಿಗಳ ಕಾಟ ಹೆಚ್ಚಾಗಿರುವುದಕ್ಕೆ ಮುನ್ಸಿಪಾಲಿಟಿಯವರ ಬೇಜವಾಬ್ದಾರಿತನವೇ ಕಾರಣವೆಂದು ವೆಟರಿ ಸ್ಟಾಕ್‌ಮನ್ ಪುಟ್ಟಯ್ಯ ನಿರೂಪಕರ ಬಳಿ ದೂರಿದನು ಆಗ ನಿರೂಪಕರು ನಿಮ್ಮ ಡಾಕ್ಟರ್‌ಗೆ ಹೇಳಿ ಮುನ್ಸಿಪಾಲಿಟಿ ಪ್ರೆಸಿಡೆಂಟರಿಗೆ ಒಂದು ಕಂಪ್ಲೇಂಟ್ ಕೊಡಿಸಬೇಕೆಂದೂ , ಜಬ್ಬಾರ್‌ನಿಗೂ ನಾಯಿ ಕಚ್ಚಿದೆಯೆಂದೂ ತಿಳಿಸಿದಾಗ ಪುಟ್ಟಯ್ಯ ಜಬ್ಬಾರ್‌ನಿಗೆ “ ಹೌದಾ ಎಲ್ಲಿ ಕಚ್ಚಿತೋ ಜಬ್ಬಾರ್‌ ? ” ಎಂದು ಪ್ರಶ್ನಿಸಿರುವ ಸಂದರ್ಭವಿದಾಗಿದೆ .

24. “ ನಾನೇನು ನೋಡಿದೀನಾ ಆನೆ ಅಲ್ಲಾಡಿಸ್ತಿರೋದನ್ನ ”

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ ಕೃಷ್ಣಗೌಡನ ಆನೆ ‘ ಎಂಬ ನೀಳತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ದುರ್ಗಪ್ಪ ತಿಪ್ಪಣ್ಣನ ಸಾವಿಗೆ ಕೃಷ್ಣಗೌಡನ ಆನೆ ಮೈತಿಕ್ಕಿದ್ದೇ ಕಾರಣವೆಂದು ಹೇಳುವನು . ಆಗ ನಾರಾಯಣ ಬೈಯುತ್ತಾ “ ಆ ಗಾಂಚಾಲಿ ಮನುಷ್ಯ ನಾಗರಾಜ ನಿಮ್ಮೆಲ್ಲಾ ಬುದ್ಧಿ ಕಲಿಸ್ತೀನಿ , ಕೋಳ ಹಾಕಿಸ್ತೀನಿ ಅಂತ ಹಾರಾಡನಲ್ಲಯ್ಯಾ , ಅವನ ಹತ್ರ ಮಾತಾಡೋದು ಹೇಗಯ್ಯಾ ? ಏನಿದ್ರೂ ರೈಟಿಂಗಿನಲ್ಲಿ ಕೊಡಬೇಕಂತೆ ! ನಾನೇನು ನೋಡಿದೀನಾ ಆನೆ ಅಲ್ಲಾಡಿಸ್ತಿರೋದನ್ನ ” ಎಂದು ಹೇಳುತ್ತಾನೆ. ಒಂದು ವೇಳೆ ರೈಟಿಂಗ್‌ನಲ್ಲಿ ಕೊಟ್ಟರೂ ತಾನು ಕೋರ್ಟು ತಿರುಗಿಕೊಂಡು ಕಾಲ ಕಳೆಯಬೇಕಾದಿತೆಂಬ ಚಿಂತೆ ದುರ್ಗಪ್ಪನದು .

25. “ ಇತ್ತ ಮುಖಹಾಕಲಿ , ಅದನ್ನು ಕೋವೀಲೆ ಹೊಡಿತೀನಿ . ”

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ‘ ಕೃಷ್ಣಗೌಡನ ಆನೆ ‘ ಎಂಬ ನೀಳತೆಯಲ್ಲಿ ಹಳೆಕೊಪ್ಪದ ಸುಬ್ಬಣ್ಣ ಈ ಮೇಲಿನ ಮಾತನ್ನು ಹೇಳುವನು . ಒಂದು ರಾತ್ರಿ ತೋಟದ ಮನೆಯಲ್ಲಿ ಮಲಗಿದ್ದ ಸುಬ್ಬಣ್ಣ ನಾಯಿಗಳು ಒಂದೇ ಸಮನೆ ಬೊಗಳುವುದನ್ನು ಕೇಳಿ ಹೊರಬಂದಾಗ ಅವನ ಕಣ್ಣೆದುರೇ ಕೊಟ್ಟಿಗೆಯ ಮಾಡು ದೊಪ್ಪನೆ ಕುಸಿದುಬಿತ್ತು . ಮೇಕೆಗಳು ಅರಚಾಡಿದವು , ಕೆಲವು ಸತ್ತೇಹೋದವು . ಸೇರಿದ ಜನರು ಕೊಟ್ಟಿಗೆಯನ್ನೇ ಉರುಳಿಸಿ ಹೋಗಿರಬೇಕಾದರೆ ಇದು ಕೃಷ್ಣಗೌಡನ ಆನೆಯದೆ ಕೆಲಸವೆಂದು ನಿರ್ಧರಿಸಿ ಆನೆಯನ್ನು ಬಗೆಬಗೆಯಾಗಿ ನಿಂದಿಸಿದಾಗ ಅವರೆದುರಿಗೆ ಸುಬ್ಬಣ್ಣ “ ಇನ್ನೊಂದು ಸಾರಿ ಅದು ಇತ್ತಲಾಗಿ ಮುಖಹಾಕಲಿ , ಅದನ್ನು ಕೋವೀಲೆ ಹೊಡಿತೀನಿ ” ಎಂದು ಕೂಗಾಡಿದ ಸಂದರ್ಭವಿದಾಗಿದೆ .

26. “ ಕಾಡಾನೆಗಳ ಕಾಟಕ್ಕೂ ಈ ಹೆಣ್ಣಾನೆಯೇ ಕಾರಣ . ”

ತೇಜಸ್ವಿಯವರು ಬರೆದಿರುವ ‘ ಕೃಷ್ಣಗೌಡನ ಆನೆ ‘ ಎಂಬ ನೀಳತೆಯಲ್ಲಿ ಫಾರೆಸ್ಟರ್ ನಾಗರಾಜನು ಮೇಲಿನ ವಾಕ್ಯವನ್ನು ಹೇಳಿದ್ದಾನೆ . ಮುನ್ಸಿಪಲ್ ಪ್ರೆಸಿಡೆಂಟರು ಕರೆದ ಪುರಪ್ರಮುಖರ ಸಭೆಯಲ್ಲಿ ಕೃಷ್ಣಗೌಡನ ಆನೆಯದೇ ಮುಖ್ಯ ವಿಷಯವಾಯಿತಲ್ಲದೆ , ಅದೇ ಎಲ್ಲಾ ಅನಾಹುತಗಳಿಗೂ ಮುಖ್ಯ ಕಾರಣವೆಂದು ಆರೋಪಿಸಲಾಯ್ತು . ನಾಗರಾಜನಿಗೆ ಆನೆಯ ಬಗ್ಗೆ ವಿಪರೀತ ಕೋಪ ಬಂದಿತ್ತು . ಆತ ಎಲ್ಲರೆದುರು ತನಗೆ ಸರಿಯಾದ ವೆಪನ್ ಕೊಟ್ಟರೆ ಆನೆಯನ್ನು ಈಗಲೇ ಶೂಟ್ ಮಾಡುವುದಾಗಿಯೂ ಊರಿನ ಬಳಿ ಕಾಡಾನೆಗಳು ಬಂದು ಕಾಟ ಕೊಡುತ್ತಿರುವುದಕ್ಕೆ ಈ ಹೆಣ್ಣಾನೆಯೇ ಕಾರಣವೆಂದೂ ಹಾರಾಡಿದ ಸಂದರ್ಭವಿದು .

krishnegowdana aane question answer pdf download

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

  1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC  ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

1 thoughts on “ದ್ವಿತೀಯ ಪಿ.ಯು.ಸಿ ಕೃಷ್ಣೇಗೌಡನ ಆನೆ ಕನ್ನಡ ನೋಟ್ಸ್‌ | 2nd PUC Krishnegowdana Aane Kannada Notes

Leave a Reply

Your email address will not be published. Required fields are marked *

rtgh